ಉಡುಪಿ: ತುಲಾಭಾರ ಕಾರ್ಯಕ್ರಮದಲ್ಲಿ ತಕ್ಕಡಿಯ ಸರಳು ಕಳಚಿಬಿದ್ದು ಪೇಜಾವಾರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಲೆಗೆ ಸಣ್ಣ ಗಾಯಗಳಾಗಿವೆ. ಸ್ವಾಮೀಜಿ ಅಪಾಯದಿಂದ ಪಾರಾಗಿದ್ದು ಸುರಕ್ಷಿತರಾಗಿದ್ದಾರೆ.
ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬುಧವಾರ ಭಕ್ತರು ದೆಹಲಿಯಲ್ಲಿ ತುಲಾಭಾರ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ತಕ್ಕಡಿಗೆ ಕಟ್ಟಿದ್ದ ಹಗ್ಗ ತುಂಡಾಗಿ ಶ್ರೀಗಳ ಮೇಲೆ ಬಿದ್ದಿದೆ. ಅವಘಡ ನಡೆಯುತ್ತಿದ್ದಂತೆ ನೆರೆದಿದ್ದ ಭಕ್ತರು ಕೆಲಕಾಲ ಆತಂಕಕ್ಕೊಳಗಾದರು. ಅದೃಷ್ಟವಶಾತ್ ಸ್ವಾಮೀಜಿಗೆ ಗಂಭೀರ ಗಾಯಗಳಾಗಲಿಲ್ಲ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ ‘ತಕ್ಕಡಿ ಕಳಚಿ ತಲೆಯ ಮೇಲೆ ಬಿದ್ದು ಸಣ್ಣ ಗಾಯವಾಗಿತ್ತು, ಒಂದೆರಡು ದಿನಗಳಲ್ಲಿ ಗಾಯ ಮಾಸಿದ್ದು ಆರಾಮವಾಗಿದ್ದೇನೆ. ಭಕ್ತರು ಗಾಬರಿಪಡಬೇಕಾದ ಅವಶ್ಯಕತೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ