ಉಡುಪಿ: ಕೋವಿಡ್–19 ಎರಡನೇ ಅಲೆಯ ಸಂಬಂಧ ವಾಣಿಜ್ಯ ಮಾರ್ಗಸೂಚಿ ಜಾರಿಗೆ ತರುವಾಗ ಚಿಲ್ಲರೆ ಮದ್ಯ ಮಾರಾಟ ಸನ್ನದುದಾರರ ಸಮಸ್ಯೆಗಳನ್ನು ಗಮದಲ್ಲಿಟ್ಟುಕೊಂಡು ಕ್ರಮ ತೆಗೆದುಕೊಳ್ಳಬೇಕು ಎಂದು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಲಾಕ್ಡೌನ್ನಿಂದಾಗಿ ಚಿಲ್ಲರೆ ಮದ್ಯ ಮಾರಾಟದಾರರು 48 ದಿನಗಳ ಬಂದ್ನಿಂದ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಸಿಎಲ್–9, 7, 2 ಹಾಗೂ 4 ಸನ್ನದುದಾರರು 1,000 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ ಬಳಿಕ ಆಹಾರದೊಂದಿಗೆ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟ ಬಳಿಕ ಉದ್ಯಮ ಸ್ವಲ್ಪ ಚೇತರಿಕೆ ಕಂಡಿತ್ತು. ಈಗ ಕೋವಿಡ್ 2ನೇ ಅಲೆ ಹೆಚ್ಚುತ್ತಿದ್ದು, ಸರ್ಕಾರ ಸೋಂಕು ನಿಯಂತ್ರಣಕ್ಕೆ ಚಿಲ್ಲರೆ ಮದ್ಯಮಾರಾಟಗಾರ ಉದ್ಯಮಕ್ಕೆ ಪೆಟ್ಟುಬೀಳುವಂತಹ ನಿರ್ಧಾರ ತೆಗೆದುಕೊಳ್ಳಬಾರದು. ಆಹಾರದೊಂದಿಗೆ ಮದ್ಯ ಸೇವಿಸಲು ಅನುಮತಿ ಮುಂದುವರಿಸಬೇಕು.
ಸರ್ಕಾರ ಉದ್ಯಮಕ್ಕೆ ವಿರುದ್ಧವಾದ ಕ್ರಮ ತೆಗೆದುಕೊಂಡರೆ ಸಿಲ್–9, ಸಿಎಲ್–9, 7, 2, 4 ಹಾಗೂ 6 ಎ ಸನ್ನದುದಾರರು ಮತ್ತೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಉದ್ಯಮಿಗಳು ಸಿದ್ಧರಿದ್ದು, ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಗೋವಿಂದರಾಜ್ ಹೆಗ್ಡೆ ಒತ್ತಾಯಿಸಿದ್ದಾರೆ.