ಬೈಂದೂರು: ಕುಂದಾಪುರ ಶಿರೂರು ನಡುವೆ ನಡೆಯುತ್ತಿರುವ ಹೆದ್ದಾರಿ ಚತುಷ್ಪಥ ಕಾಮಗಾರಿ ಈ ಪ್ರದೇಶದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಕಾರಣದಿಂದ ಅವಾಂತರ ಸೃಷ್ಟಿಸಿದೆ. ಬಹಳ ಮುಖ್ಯವಾಗಿ ಮೋರಿ ನಿರ್ಮಿಸುವಾಗ ಆಯಾ ಪ್ರದೇಶಗಳ ಭೂಮಿ ಮಟ್ಟವನ್ನು ಸರಿಯಾಗಿ ಗಮನಿಸದ ಕಾರಣಕ್ಕೆ ಆ ಸ್ಥಳಗಳಲ್ಲಿ ಮಳೆ ನೀರಿನ ಹರಿವಿಗೆ ತಡೆಯುಂಟಾಗಿದೆ. ಅಲ್ಲಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತು ನಿವಾಸಿಗಳಿಗೆ ಸಮಸ್ಯೆ ಉಂಟಾಗಿದೆ.
ಇಲ್ಲಿ ಹೊಸ ಮೋರಿಯನ್ನು ಹಳೆ ಮೋರಿಗಿಂತ ಕಿರಿದಾಗಿಸಿದ್ದರಿಂದ ಪಕ್ಕದ ತೋಡಿನ ಮೂಲಕ ಹರಿದು ಬರುವ ಮಳೆ ನೀರು ಸುಸೂತ್ರವಾಗಿ ಮುಂದೆ ಹರಿಯುವುದಕ್ಕೆ ಅಡ್ಡಿ ಉಂಟಾಗಿದೆ. ಸಂಗ್ರಹವಾದ ನೀರು ಹತ್ತಿರದ ಮನೆಗಳನ್ನು ಸುತ್ತುವರಿದಿದೆ. ಚೆನ್ನಯ್ಯ ಭಂಡಾರಿ, ಸರೋಜಾ ಸುವರ್ಣ, ಪೀಯುಸ್ ಡಿಸೋಜ, ಲಕ್ಷ್ಮಣ ಸುವರ್ಣ ಅವರ ಮನೆಯ ಅಂಗಳದ ವರೆಗೂ ನೀರು ನುಗ್ಗಿದೆ. ಅವರೆಲ್ಲ ಗಂಟು ಮುಳುಗುವಷ್ಟು ಆಳದ ನೀರಿನಲ್ಲಿ ಓಡಾಡಬೇಕಾಗಿದೆ.
ಸುಮಾರಾಗಿ ಇದೇ ಸ್ಥಿತಿ ಉಪ್ಪುಂದ, ಯಡ್ತರೆ, ಶಿರೂರು, ನಾಗೂರಿನಲ್ಲೂ ಕಂಡು ಬರುತ್ತಿದೆ. ಕೆಲವೆಡೆ ನಿರ್ಮಿಸಿದ ಹೊಸ ರಸ್ತೆ ಹಳೆ ಭಾಗಕ್ಕಿಂತ ಮೂರು, ನಾಲ್ಕು ಅಡಿ ಎತ್ತರವಿರುವುದರಿಂದ ಹಳೆ ಭಾಗದ ಒಂದು ಚರಂಡಿ ಮುಚ್ಚಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ಅಲ್ಲೆಲ್ಲ ಗುಂಡಿಗಳ ನಿರ್ಮಾಣವಾಗುತ್ತಿದೆ. ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು ಸಮಸ್ಯೆ ಉಂಟಾಗಿರುವುದರಿಂದ ತಕ್ಷಣವೇ ಯಂತ್ರಗಳೊಂದಿಗೆ ಸ್ಥಳಕ್ಕೆ ಧಾವಿಸಿ ಮಳೆ ನಡುವೆಯೇ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.