ಬ್ರಹ್ಮಾವರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದಲ್ಲಿ ಇದೇ 20ರಿಂದ ಪ್ರಾರಂಭವಾಗುವ ಎಸ್ಸೆಸ್ಸೆಲ್ಸಿ ಮೌಲ್ಯ ಮಾಪನವನ್ನು ಕಪ್ಪು ಪಟ್ಟಿ ಧರಿಸಿ ಮಾಡಲು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತರ ಸಂಘ ನಿರ್ಧರಿಸಿದೆ.2006ರ ಏ.1ರ ಬಳಿಕ ಹಾಗೂ ಅದಕ್ಕೂ ಮೊದಲೇ ನೇಮಕವಾದ, ಸರ್ಕಾರದ ಸಹಾಯಾನುದಾನಕ್ಕೆ ಒಳ ಪಟ್ಟ, ಅನುದಾನಿತ ಶಾಲಾ -ಕಾಲೇಜು ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯಾಗಲಿ ಅಥವಾ ಇತ್ತೀಚಿನ ವಂತಿಗೆ ಆಧಾರಿತ ನೂತನ ಪಿಂಚಣಿ (ಓ.ಪಿ.ಎಸ್) ಆಗಲ ಅನ್ವಯಿಸುವುದಿಲ್ಲ.
ಆದರೆ ಅದೇ ಸಮಯದಲ್ಲಿ ನೇಮಕಗೊಂಡ ಸರ್ಕಾರಿ ಶಾಲಾ- ಕಾಲೇಜಿನ ನೌಕರರಿಗೆ ನೂತನ ಪಿಂಚಣಿ ಯೋಜನೆ ಅಡಿಯಲ್ಲಿ ನೌಕರನ ವಂತಿಗೆಗೆ ಪ್ರತಿಯಾಗಿ ಸರ್ಕಾರವೇ ತನ್ನ ಪಾಲಿನ ವಂತಿಗೆ ಭರಿಸುತ್ತಿದೆ. ಅನು ದಾನಿತ ಶಾಲಾ ಕಾಲೇಜಿನ ನೌಕರರಿಗೆ ಮಾತ್ರ ಆಡಳಿತ ಮಂಡಳಿಗಳೇ ವಂತಿಗೆ ಯನ್ನು ಭರಿಸಬೇಕೆಂಬ ಅವೈಜ್ಞಾನಿಕ ನಿಯಮ ಸೇರಿಸುವ ಮೂಲಕ ಮಲ ತಾಯಿ ಧೋರಣೆಯನ್ನು ಸರ್ಕಾರವು ಅನುಸರಿಸುತ್ತಿದೆ. ಆದರೆ ಬಹಳಷ್ಟು ಆಡಳಿತ ಮಂಡಳಿಗಳ ಆರ್ಥಿಕ ಪರಿಸ್ಥಿತಿಯೂ ಚಿಂತಾಜನಕವಾಗಿರು ವುದರಿಂದ ತಮ್ಮ ಪಾಲಿನ ವಂತಿಗೆ ಯನ್ನು ಆಡಳಿತ ಮಂಡಳಿಗಳು ಭರಿ ಸಲು ಅಸಾಧ್ಯವಾಗಿದೆ. ಇದರಿಂದ ನಿವೃತ್ತಿಯ ಬಳಿಕ ಯಾವುದೇ ಆರ್ಥಿಕ ಸೌಲಭ್ಯವಿಲ್ಲದೆ ಪಿಂಚಣಿ ವಂಚಿತ ಈ ನೌಕರರ ಬದುಕು ಅತಂತ್ರವಾಗಿದೆ ಎಂದು ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ಗಣೇಶ್ ಶೆಟ್ಟಿಗಾರ್ ತಿಳಿಸಿದ್ದಾರೆ.
ಸರ್ಕಾರದ ನಿಯಮಾವಳಿ ಯಂತೆಯೇ ಆಡಳಿತ ಮಂಡಳಿಯಿಂದ ನೇಮಕಗೊಂಡು, ವೃತ್ತಿಯಲ್ಲಿ ಇತರ ಸರ್ಕಾರೀ ನೌಕರರಂತೆಯೇ ಕರ್ತವ್ಯ ನಿರ್ವಹಿಸಿ, ನಿವೃತ್ತಿಯಾದಾಗ ಮಾತ್ರ ತಿಂಗಳ ಕೊನೆಯ ಸಂಬಳದೊಂದಿಗೆ ಅಸಹಾಯಕರಾಗಿ ಬರಿಗೈಯಲ್ಲಿ ಮನೆಗೆ ತೆರಳಬೇಕಾದ ಶೋಚನೀಯ ಪರಿಸ್ಥಿತಿ ಈ ನೌಕರರದ್ದಾಗಿದೆ. ಅಸಂಘಟಿತ ಕಾರ್ಮಿಕರಿಗೆ ಭವಿಷ್ಯದ ಭದ್ರತೆಯ ದೃಷ್ಟಿಯಲ್ಲಿ ನೀಡುತ್ತಿರುವ ಪಿ.ಈ ಮತ್ತು ಇ.ಎಸ್.ಐ ಮುಂತಾದ ಸೌಲಭ್ಯಗಳೂ ಈ ನೌಕರರಿಗೆ ದೊರಕುತ್ತಿಲ್ಲ. ಈ ಕಾರಣ ದಿಂದ ಪಿಂಚಣಿಗಾಗಿ ತಮ್ಮ ನ್ಯಾಯ ಯುತ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರದ ಗಮನವನ್ನು ಸೆಳೆಯಲು ಮೌಲ್ಯಮಾಪನ ಕಾರ್ಯದಲ್ಲಿ ಕಪ್ಪುಪಟ್ಟಿ ಧರಿಸಿ, ತಮ್ಮ ಕರ್ತವ್ಯವನ್ನು ನೌಕರರು ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.