ಉಡುಪಿ: `ಪ್ರಸ್ತುತ ನಮ್ಮಲ್ಲಿ ಸೃಜನಶೀಲತೆ ಕಡಿಮೆಯಾಗುತ್ತಿದೆ, ಗೂಗಲ್ ಸಂಸ್ಕೃತಿ ಹೆಚ್ಚುತ್ತಿದೆ~ ಎಂದು ಪರಿಸರ ತಜ್ಞ ಡಾ.ಎನ್.ಎ.ಮಧ್ಯಸ್ಥ ಇಲ್ಲಿ ವಿಷಾದ ವ್ಯಕ್ತ ಪಡಿಸಿದರು.
ಉಡುಪಿಯ ಅಕಲಂಕ ಪ್ರತಿಷ್ಠಾನದ ವತಿಯಿಂದ ಎಂಜಿಎಂನಲ್ಲಿ ಭಾನುವಾರ ಆಯೋಜಿಸಿದ್ದ `ಅಕಲಂಕ ಪುಸ್ತಕ ಪುರಸ್ಕಾರ~ ವಿಜೇತ `ಹೂವು ಮತ್ತು ಆರೋಗ್ಯ~ ಕೃತಿ ಪರಿಚಯ ಮಾಡಿದರು.
`ಈ ಎಲ್ಲ ಬೆಳವಣಿಗೆಯ ಒಟ್ಟಾರೆ ಪರಿಣಾಮ ಪುಸ್ತಕ ಬರೆಯುವವರಿಗೆ ಹಿನ್ನಡೆಯಾಗಿದೆ. ಪುಸ್ತಕ ಓದುವವ ಮಾತ್ರವೇ ಕೊಂಡುಕೊಳ್ಳುವ ಸಂಸ್ಕೃತಿಯಿಂದಾಗಿ ಪುಸ್ತಕ ಬರೆಯವುದಕ್ಕೂ ಹಿಂಜರಿಕೆಯಾಗಿದೆ~ ಎಂದು ಅವರು ವಿಶ್ಲೇಷಿಸಿದರು.
`ದೆಹಲಿ ಕನ್ನಡಿಗ~ ಪತ್ರಿಕೆಯ ಸಂಪಾದಕ ಬಾ.ಸಾಮಾಗ ಮಾತನಾಡಿ, `ಜನರ ಬದುಕಿಗೆ ಹತ್ತಿರವಾಗುವ ಕೃತಿಗಳಿಗೆ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಆರೋಗ್ಯ ಮತ್ತು ಅಡುಗೆ ಪುಸ್ತಕಗಳಿಗೆ ಬೇಡಿಕೆ ಹೆಚ್ಚು. ಸಾಹಿತ್ಯ ಕೃತಿಗಳು ಜನರಿಗೆ ಹತ್ತಿರವಾಗುವುದರ ಜತೆಗೆ ಕೃತಿಕಾರರಿಗೆ ಲಾಭ ತರಬೇಕು ಎಂದರು.
`ಅನುವಾದಿತ ಕೃತಿಗಳಿಂದ ಭಾಷೆ ಮತ್ತು ಸಾಹಿತ್ಯ ವಿಶ್ವಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ~ ಎಂದು ಅವರು ಅಭಿಪ್ರಾಯಪಟ್ಟರು.
ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಅಂಬಾತನಯ ಮುದ್ರಾಡಿ ಮಾತನಾಡಿ, `ಪ್ರಸ್ತುತ ಸಾಹಿತ್ಯ ನಮ್ಮ ಅರಿವಿನ ಎಲ್ಲ ಮಗ್ಗಲುಗಳಲ್ಲಿ ತೆರೆದುಕೊಂಡಿದೆ, ವಿಜ್ಞಾನ, ವೈದ್ಯಕೀಯ, ಭೂಗೋಲಗಳೆಲ್ಲ ಸಾಹಿತ್ಯವಾಗಿವೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಡಾ.ಉಪ್ಪಂಗಳ ರಾಮಭಟ್ಟ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಡಾ.ವಸುಂಧರಾ ಭೂಪತಿ, ವಕೀಲ ಭೂಪತಿ, ಉದ್ಯಮಿ ರಬೀಂದ್ರನಾಯಕ್, ಪ್ರಾಧ್ಯಾಪಕ ಡಾ.ಡಿ.ಆರ್.ಪಾಂಡುರಂಗ ಮತ್ತಿತರರು ಉಪಸ್ಥಿತರಿದ್ದರು.