ಸುರತ್ಕಲ್: ‘ಯಕ್ಷಗಾನ ತರಗತಿಗಳು ಹೊಸ ಕಲಾವಿದರ ಸೃಷ್ಟಿಗೆ ಕಾರಣವಾಗುತ್ತದೆ. ಅಭಿರುಚಿ ಉಳ್ಳ ಆಸಕ್ತರಿಗೆ ಯಕ್ಷಗಾನ ತರಗತಿಗಳು ಕಲಿಕೆಯ ವೇದಿಕೆಯಾಗುತ್ತವೆ’ ಎಂದು ಯಕ್ಷಗಾನ ಹಿಮ್ಮೇಳ ಶಿಕ್ಷಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಪಣಂಬೂರು ನಂದನೇಶ್ವರ ದೇವಸ್ಥಾನದಲ್ಲಿ ಪಣಂಬೂರು ಯಕ್ಷಗಾನ ಕಲಾ ಮಂಡಳಿ, ಯಕ್ಷನಂದನ, ಪದ್ಮನಾಭಯ್ಯ ಶ್ಯಾನ್ಬೋಗ್ ಕಲಾ ಪರಿಷತ್, ರೋಟರಿ ಕ್ಲಬ್ ಪೋರ್ಟ್ಟೌನ್, ನಂದನೇಶ್ವರ ದೇವಸ್ಥಾನದ ಸಹಭಾಗಿತ್ವದಲ್ಲಿ ಆರಂಭವಾದ ಯಕ್ಷಗಾನ ಹಿಮ್ಮೇಳ-ನಾಟ್ಯ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಶನಿವಾರ ಮದ್ಯಾಹ್ನ 2 ರಿಂದ 6ರವರೆಗೆ ತರಗತಿ ನಡೆಯಲಿದೆ. ಸಂಘ ಸಂಸ್ಥೆಗಳು ಯಕ್ಷಗಾನದ ಬೆಳವಣಿಗೆ ಪ್ರೋತ್ಸಾಹ ನೀಡಬೇಕಿದೆ. ಯಕ್ಷ ಶಿಕ್ಷಣವನ್ನು ಆಸಕ್ತರಿಗೆ ದೊರಕಿಸುವತ್ತ ಗಮನಹರಿಸಬೇಕಿದೆ ಎಂದರು.
ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಯಕ್ಷಗಾನ ವಿದ್ಯಾರ್ಥಿಗಳು ಹಾಗೂ ಅತಿಥಿಗಳು ಸನ್ಮಾನಿಸಿದರು. ಯಕ್ಷಗಾನ ಕಲಾ ಮಂಡಳಿಯ ಉಪಾಧ್ಯಕ್ಷ ಕೆ.ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪದ್ಮನಾಭಯ್ಯ ಶಾನುಬೋಗ್ ಕಲಾ ಪರಿಷತ್ ಸಂಚಾಲಕ ಶಂಕರನಾರಾಯಣ ಮೈರ್ಪಾಡಿ, ಎನ್ಎಂಪಿಟಿ ಶಾಲೆಯ ಅಧ್ಯಾಪಕ ಸುಬ್ರಹ್ಮಣ್ಯ, ಯಕ್ಷನಂದನದ ಪಿ.ವಿ.ಐತಾಳ್, ಇಂಗ್ಲಿಷ್ ಯಕ್ಷಗಾನ ಬಳಗದ ಸಂತೋಷ್ ಐತಾಳ್, ಯಕ್ಷಗಾನ ಹಿಮ್ಮೇಳ ಶಿಕ್ಷಕ ರಾಕೇಶ್ ರೈ ಎನ್ಎಂಪಿಟಿ, ಮಧುಕರ ಭಾಗವತ್ ಮತ್ತಿತರರು ಉಪಸ್ಥಿತರಿದ್ದರು.