ಶಿರ್ವ: ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿ ಜಿಲ್ಲೆಯಿಂದ ಸ್ಪರ್ಧೆ ಮಾಡಿದ್ದ ಏಕೈಕ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಹಿರಿಮೆ ಸ್ವಯಂ ನಿವೃತ್ತಿ ಪಡೆದ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರದ್ದು. ಕಾಪು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ 1634 ಮತಗಳಿಸಿ ಸೋಲು ಕಂಡಿದ್ದಾರೆ.
ಜಿಲ್ಲೆಯಲ್ಲಿ ಮೂರು ಪಕ್ಷಗಳಿಂದ ಒಬ್ಬ ಮಹಿಳೆಗೂ ಚುನಾವಣೆಗೆ ಸ್ಪರ್ಧೆ ಮಾಡಲು ಟಿಕೆಟ್ ನೀಡಿರಲಿಲ್ಲ. ಆದರೆ ಅನುಪಮಾ ಶೆಣೈ ಮಾತ್ರ ಸ್ಪರ್ಧೆ ಮಾಡಿದ್ದರು. ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದೆಯಾಗಿ ಶೋಭಾ ಕರಂದ್ಲಾಜೆ ಆಯ್ಕೆ ಆಗಿದ್ದಾರೆ. ಸ್ವತಂತ್ರ ಪಕ್ಷದಿಂದ ಸ್ಪರ್ಧೆ ಮಾಡಿ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆದಿದ್ದ ಚರ್ಚೆ ಆಗಿತ್ತು.
ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿ, ರಾಜ್ಯದ 21 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣ್ಣಕ್ಕಿಳಿಸಲಾಗಿತ್ತು. ಆದರೆ ಯಾವೊಬ್ಬ ಅಭ್ಯರ್ಥಿಯೂ ಗೆಲುವು ಸಾಧಿಸಲಿಲ್ಲ. ಕಾಪು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಅನುಪಮಾ ಶೆಣೈ ಸೋಲು ಕಂಡಿದ್ದಾರೆ. ಆದರೆ ಅವರು ಛಲ ಬಿಡದೆ ಬರುವ ಸ್ಥಳೀಯಾಡಳಿತ ಚುನಾವಣೆಗೆ ಪಕ್ಷ ಬಲಪಡಿಸಲು ಸಿದ್ಧತೆಯಲ್ಲಿದ್ದಾರೆ.
ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತ ರಾಗಿದ್ದಾರೆ. ಹೊಸ ಪಕ್ಷವೊಂದು ತರಾತುರಿಯಲ್ಲಿ ಅಸ್ತಿತ್ವಕ್ಕೆ ಬಂದ ಕಾರಣ ಪಕ್ಷದ ಸಿದ್ಧಾಂತಗಳ ಬಗ್ಗೆ ಹಾಗೂ ಪಕ್ಷದ ಚಿಹ್ನೆಯ ಬಗ್ಗೆ ತಿಳಿದುಕೊಳ್ಳುವಲ್ಲಿ ಮತದಾರರು ವಿಫಲರಾಗಿದ್ದಾರೆ. ಈ ಚುನಾವಣೆ ನಮ್ಮ ಪಕ್ಷಕ್ಕೆ ಒಂದು ಮಾದರಿ ಮಾತ್ರ. ಪಕ್ಷದ ಅಧಿನಿಯಮ, ರೂಪುರೇಷೆ,ಪ್ರಣಾಳಿಕೆ ಪರಿಷ್ಕರಣೆ ಮಾಡಿ, ಹೆಚ್ಚು ಹೆಚ್ಚು ಆಸಕ್ತರನ್ನು ಪಕ್ಷಕ್ಕೆ ಸೇರಿಸುವ ಇರಾದೆ ಹೊಂದಿರುವುದಾಗಿ ಅನುಪಮಾ ಶೆಣೈ ಇಂಗಿತ ವ್ಯಕ್ತಪಡಿದರು.
ರಾಜ್ಯದಾದ್ಯಂತ ತಮ್ಮ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಬಾರಿ ಆರ್ಥಿಕವಾಗಿ ಪಕ್ಷವೂ ಸದೃಢವಾಗಿ ಇರದೇ ಇರುವುದರಿಂದ ಸೋಲು ಕಂಡಿದೆ. ಪ್ರಬಲ ರಾಜಕೀಯ ನಾಯಕರು ಕಾಪು ಮತ್ತು ಕಾರ್ಕಳ ವಿಧಾನ ಸಭಾ ಕ್ಷೇತ್ರದಿಂದ ನಮ್ಮ ಪಕ್ಷ ಸೇರಿ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಮಾತುಕತೆ ನಡೆದಿತ್ತು. ಕೊನೆ ಕ್ಷಣದಲ್ಲಿ ಅದು ಕೈಗೂಡಲಿಲ್ಲ ಎಂದು ಅವರು ಹೇಳಿದರು.
ಕೊನೆ ಕ್ಷಣದ ನಿಲುವು
ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷವನ್ನು ಫೆಬ್ರುವರಿ ತಿಂಗಳಲ್ಲಿ ಸಂಘಟಿಸಿ, ನೋಂದಣಿ ಮಾಡಲಾಯಿತು. ಚುನಾವಣಾ ಆಯೋಗಕ್ಕೆ ಚುನಾವಣೆಗೆ ಸಂಬಂಧಿಸಿದ ದಾಖಲೆ ಪೂರೈಸಿ ಪಕ್ಷದ ಹೊಸ ಅಭ್ಯರ್ಥಿಗಳನ್ನು ರಾಜ್ಯದಾದ್ಯಂತ ಸಂಪರ್ಕ ಮಾಡಿ ಕಣಕ್ಕಿಳಿಸುವಲ್ಲಿ ವಿಳಂಬವಾಯಿತು. ನಾನು ಕೂಡಾ ಮೊದಲು ಬಳ್ಳಾರಿಯಲ್ಲಿ ಸ್ಪರ್ಧಿಸುವ ಬಗ್ಗೆ ಚಿಂತನೆ ಮಾಡಿದ್ದೆ. ಅದನ್ನು ಕೈ ಬಿಟ್ಟು ಕಾಪುವಿನಲ್ಲಿ ಸ್ಪರ್ಧಿಸಿ ಸೋಲು ಕಂಡೆ ಎಂದು ಅನುಪಮಾ ಶೆಣೈ
ಪ್ರಕಾಶ್ ಕಟಪಾಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.