ಪಡುಬಿದ್ರಿ: ಮೌಲ್ಯ, ಸಂಸ್ಕಾರವನ್ನು ಸಮಾಜದ ಸರ್ವರಿಗೂ ನೀಡಿದಾಗ ಸಾಮಾಜಿಕ ಅಭಿವೃದ್ಧಿ ಸಾಧ್ಯ~ ಎಂದು ಕನ್ಯಾಡಿ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಪಡುಬಿದ್ರಿಯ ಬೋರ್ಡು ಶಾಲಾ ಮೈದಾನದಲ್ಲಿ ಭಾನುವಾರ ದಕ್ಷಿಣ ಕನ್ನಡ, ಉಡುಪಿ ವಲಯದ ಕೋಟಿ ಚೆನ್ನಯ ಸೇವಾ ಬಳಗವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
`ಸಂಘಟನೆಯಲ್ಲಿ ಯಾವತ್ತೂ ಜಾತಿ-ಮತಾಂಧತೆ ಇರಬಾರದು. ಸರ್ವ ಜನಾಂಗದ ಒಳಿತಿಗಾಗಿ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು. ಪ್ರತಿಯೋಬ್ಬರು ಕೋಟಿ ಚೆನ್ನಯರ ಜೀವನ ಕ್ರಮ ಅಳವಡಿಸಿಕೊಂಡಾಗ ಸಂಘಟನೆ ಸಾರ್ಥಕವಾಗುತ್ತದೆ~ ಎಂದರು.
ಎಐಸಿಸಿ ಕಾರ್ಯದರ್ಶಿ ವಿನಯಕುಮಾರ್ ಸೊರಕೆ ಮಾತನಾಡಿ, `ಯುವ ಶಕ್ತಿಯನ್ನು ಸಮಾಜದ ಸತ್ಕಾರ್ಯಗಳಿಗೆ ಪ್ರೇರೇಪಿಸುವ ಕಾರ್ಯ ನಡೆಯಲಿ~ ಎಂದರು. ಪಡುಬಿದ್ರಿ ಸಿ.ಎ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ವಸಂತ ಸಾಲ್ಯಾನ್, ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ಬಿಲ್ಲವ ಪರಿಷತ್ ಅಧ್ಯಕ್ಷ ಶೇಖರ ಕರ್ಕೇರ, ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್, ಬಳಗದ ಗೌರವಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಅಧ್ಯಕ್ಷ ಗಣೇಶ್ ಎನ್.ಕೋಟ್ಯಾನ್, ಬಳಗದ ರಾಜೇಶ್ ಎನ್.ಕೋಟ್ಯಾನ್, ಕರುಣಾಕರ ಪೂಜಾರಿ, ಗಿರಿಧರ ಅಂಚನ್, ರಾಜೇಶ್ ಶೇರಿಗಾರ್ ಇದ್ದರು.