ಬ್ರಹ್ಮಾವರ: ಮಕ್ಕಳಿಗೆ ಯೋಗ್ಯವಾದ ಶಿಕ್ಷಣ ನೀಡಿದಲ್ಲಿ ಮತ್ತು ಒಳ್ಳೆಯ ಕೆಲಸಗಳನ್ನು ಮಾಡುವ ಉದ್ದೇಶ ಯುವ ಜನಾಂಗದಲ್ಲಿದ್ದಾಗ ಸಮಾಜದ ಉನ್ನತಿಯಾಗುತ್ತದೆ ಎಂದು ಕಾರ್ಕಳ ಬೊಲ್ಯೊಟ್ಟು ಗುರುಕೃಪಾ ಸೇವಾ ಆಶ್ರಮದ ವಿಖ್ಯಾತನಂದ ಸ್ವಾಮೀಜಿ ಹೇಳಿದರು.
ನಗರದ ನಾರಾಯಣಗುರು ಸಭಾಭವನದಲ್ಲಿ ಬ್ರಹ್ಮಶ್ರೀ ಬಿಲ್ಲವ ಬಳಗದ ವತಿಯಿಂದ ಇತ್ತೀಚೆಗೆ ನಡೆದ `ನಮ ಬಿರುವೆರ್~ ಬಿಲ್ಲವ ಸಾಧಕರಿಗೆ ಸನ್ಮಾನ ಹಾಗೂ ಬಿಲ್ಲವ ಜಾಗೃತಿ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.
ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಮಾಜ ನಮ್ಮದಾಗಬೇಕು. ಶಿಸ್ತುಬದ್ಧ ಜೀವನದ ಮೂಲಕ ಪರಪೂರ್ಣ ಸಮಾಜ ನಿರ್ಮಿಸುವಲ್ಲಿ ಸಂಘಟಿತರಾಗಬೇಕು ಎಂದರು.ಕೇರಳ ವರ್ಕಳ ಶಿವಗಿರಿ ಮಠದ ಸತ್ಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ `ಮನುಷ್ಯನಲ್ಲಿ ಆಧ್ಯಾತ್ಮಿಕ ಜಾಗೃತಿ ದೇವಸ್ಥಾನಗಳ ಮೂಲಕ ಆಗುತ್ತಿದೆ. ಭೌತಿಕ ಜಾಗೃತಿ ಶಾಲಾ ಕಾಲೇಜುಗಳಿಂದ ಆಗುತ್ತಿದೆ. ಗುರುಭಕ್ತಿ, ದೇವರ ಭಕ್ತಿ ಇದ್ದಲ್ಲಿ ಮಾತ್ರ ಸುಂದರ ಜೀವನ ನಡೆಸಬಹುದು~ ಎಂದರು.
ಇದಕ್ಕೂ ಮುನ್ನ ಕಬ್ಬಡಿ ವಿಶ್ವ ಚಾಂಪಿಯನ್ ಭಾರತ ತಂಡದ ನಾಯಕಿ ಮಮತಾ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬ್ರಹ್ಮಾವರ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಬಡ್ಡಿ ವಿಶ್ವ ಚಾಂಪಿಯನ್ ಭಾರತ ತಂಡದ ನಾಯಕಿ ಮಮತಾ ಪೂಜಾರಿ, ಕಾಡೂರಿನ ಸಂಜಯ್ ದಯಾನಂದ್, ಬೀಡಿನಗುಡ್ಡೆ ರುದ್ರಭೂಮಿಯ ಕಾವಲುಗಾರ್ತಿ ವನಜ ಪೂಜಾರ್ತಿ ಅವರನ್ನು ಸನ್ಮಾನಿಸಲಾಯಿತು. ಕಿರುತೆರೆ ನಟ ಹಾಗೂ ಕೋಟಿ ಚೆನ್ನಯ್ಯ ಪುಸ್ತಕದ ಲೇಖಕ ಸುರ್ಯೋದಯ ಕೋಟಿ ಚೆನ್ನಯ್ಯ ಚಿತ್ರಗಳನ್ನು ಅನಾವರಣಗೊಳಿಸಿದರು.
ಮಾಜಿ ಸಚಿವ ವಸಂತ್ ಸಾಲಿಯಾನ್, ಮೂರ್ತೆದಾರರ ಮುಖಂಡ ಕೊರಗ ಪೂಜಾರಿ ಕೋಟ, ಬಿಲ್ಲವ ಸೇವಾ ಸಂಘ ಕೊಕ್ಕರ್ಣೆಯ ಅಧ್ಯಕ್ಷ ಸಂಜೀವ ಮಾಸ್ತರ್, ಉದಯಕುಮಾರ್ ಮತ್ತಿತರರು ಇದ್ದರು. ಕಾರ್ಯಕ್ರಮದ ಸಂಘಟಕ ಬಾರ್ಕೂರು ಸತೀಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಪೂಜಾರಿ ಸ್ವಾಗತಿಸಿದರು. ಜ್ಯೋತಿ ಸಾಲಿಗ್ರಾಮ, ಸತೀಶ್ ವಡ್ಡರ್ಸೆ, ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.