ಗೋಕರ್ಣ: ಇಲ್ಲಿಯ ಮೇನ್ ಬೀಚ್ ಬಳಿ ಅಂದಾಜು ₹1 ಕೋಟಿ ವೆಚ್ಚದ ಸೇತುವೆ ಕಾಮಗಾರಿ ವಾಹನ ಸಂಚಾರದ ದಟ್ಟಣೆಯಿಂದ ಪ್ರಾರಂಭದಲ್ಲಿಯೇ ನಿಂತಿದ್ದು, ಕುಮಟಾ ಉಪವಿಭಾಗಾಧಿಕಾರಿ ಎಂ. ಅಜಿತ್ ಭೇಟಿ ನೀಡಿ ಪರಿಶೀಲಿಸಿದರು. ಲೋಕೋಪಯೋಗಿ ಇಲಾಖೆಯ ಮನವಿ ಮೇರೆಗೆ ಬದಲಿ ವಾಹನ ಸಂಚಾರ ಮಾರ್ಗಕ್ಕೆ ಸೂಚಿಸಿದರು.
ಸಮುದ್ರ ತೀರಕ್ಕೆ ಹೋಗಲು ಮುಖ್ಯ ರಸ್ತೆ ಇದಾಗಿದ್ದು ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟದಿಂದ ಕಾಮಗಾರಿ ನಡೆಸಲು ತೀರಾ ತೊಂದರೆಯಾಗಿತ್ತು. ಇದರಿಂದ ಕುಮಟಾ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಶಶಿಕಾಂತ ಕೋಳೆಕರ್ ವಾಹನ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸುವಂತೆ ಮನವಿ ಮಾಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಮ್. ಅಜಿತ್ ಜನವರಿ 4ರಿಂದ ಕಾಮಗಾರಿ ಮುಗಿಯುವ ತನಕ ವಾಹನ ಸಂಚಾರ ನಿಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ರಥಬೀದಿಯಿಂದ ಸಮುದ್ರಕ್ಕೆ ಬರುವವರು ಏಕಮುಖ ರಸ್ತೆಯಿಂದ ಓಂ ಹೋಟೆಲ್ ಎದುರಿನ ಸಮುದ್ರಕ್ಕೆ ಹೋಗುವ ರಸ್ತೆಯನ್ನು ಬಳಸಬೇಕು. ಸಮುದ್ರದಿಂದ ಮುಖ್ಯ ರಸ್ತೆಗೆ ಹೋಗುವ ವಾಹನಗಳು ರುದ್ರಪಾದ ರಸ್ತೆಯಿಂದ ಬಿಜ್ಜೂರಿನ ರಸ್ತೆಯಲ್ಲಿ ಬಂದು ಮುಖ್ಯ ರಸ್ತೆಗೆ ಸಾಗಬೇಕಿದೆ.