ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಮುಖ ನೋಡಿ ಅಲ್ಲ, ಪಕ್ಷಕ್ಕಾಗಿ ದುಡಿದಿದ್ದಾರೆ: ಕಾರ್ಯಕರ್ತರ ಶ್ಲಾಘಿಸಿದ ಸಚಿವ

ಅವಲೋಕನಾ ಸಭೆಯಲ್ಲಿ ಸಚಿವ ಅನಂತಕುಮಾರ
Last Updated 12 ಮೇ 2019, 12:58 IST
ಅಕ್ಷರ ಗಾತ್ರ

ಕಾರವಾರ: ‘ಅನಂತಕುಮಾರ ಹೆಗಡೆಯ ಮುಖ ನೋಡಿ ಯಾವ ಕಾರ್ಯಕರ್ತರೂ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ. ಪಕ್ಷಕ್ಕಾಗಿ ದುಡಿದಿದ್ದಾರೆ. ವಿಚಾರಗಳನ್ನು ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ದುಡ್ಡು, ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಇದೆಲ್ಲ ಹೇಗೆ ತಿಳಿಯಬೇಕು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ನಗರದಲ್ಲಿ ಅವಲೋಕನಾ ಸಭೆ ನಡೆಸಿ ಭಾನುವಾರ ಮಾತನಾಡಿದ ಅವರು, ‘ಕೆಲವರು ಅನಂತಕುಮಾರ ಹೆಗಡೆ ತಮ್ಮ ಹೆಸರಲ್ಲಿ ಮತ ಕೇಳುತ್ತಿಲ್ಲ, ಮೋದಿ ಹೆಸರಲ್ಲಿ ಕೇಳುತ್ತಿದ್ದಾರೆ ಎನ್ನುತ್ತಿದ್ದರು. ಸಂಸ್ಕಾರ ಇಲ್ಲದ, ಅದರ ಬಗ್ಗೆ ಪರಿಜ್ಞಾನ ಇಲ್ಲದ ಗೂಬೆಗಳು ಮಾತನಾಡುವುದೇ ಹೀಗೆ’ ಎಂದು ವಾಗ್ದಾಳಿ ನಡೆಸಿದರು.

‘1996ರಿಂದ ಚುನಾವಣೆ ಎದುರಿಸುತ್ತಿದ್ದೇನೆ. ಚಡ್ಡಿ ಹಾಕಲು ಬರದ, ಸರಿಯಾಗಿ ಮಾತನಾಡಲು ಬರದ ವಯಸ್ಸಿನಲ್ಲಿ ಸಂಘದ ಶಾಖೆಗೆ ಹೋದವನು ನಾನು. ಅಂದಿನಿಂದ ಈವರೆಗೂ ಶಬ್ದಗಳನ್ನು ಯೋಚನೆ ಮಾಡಿಯೇ ಮಾತನಾಡುತ್ತೇನೆ. ಅದು ಅರ್ಥ ಆಗದವರಿಗೆ ವಿವಾದ ಎನಿಸುತ್ತದೆ. ಅದು ನನ್ನ ತಪ್ಪಲ್ಲ. ನಾನು ಮಾತನಾಡಿದ್ದನ್ನು ಯಾವಾತ್ತೂ ವಾಪಸ್ ತೆಗೆದುಕೊಂಡಿಲ್ಲ. ಯೋಚನೆ ಮಾಡದೇ ಯಾವುದನ್ನೂ ಮಾತನಾಡಿಲ್ಲ’ ಎಂದು ಹೇಳಿದರು.

‘ಸಂಘಟನೆಯ, ಕುಟುಂಬದ ಸಂಸ್ಕಾರ ನನಗಿದೆ. ಹೀಗಾಗಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಹೇಳಿದ ಮಾತುಗಳನ್ನು ಈಗಲೂ ಹೇಳುತ್ತೇನೆ, ಸಾಯುವವರೆಗೂ ಹೇಳುತ್ತೇನೆ. ಕೆಲವೊಂದು ಶಬ್ದಗಳು ನಮ್ಮ ಶಬ್ದಕೋಶದಲ್ಲಿ ಹೇಗೆ ಸೇರಿಕೊಂಡಿವೆ ಗೊತ್ತಿಲ್ಲ. ಅದರಲ್ಲಿ ಕೆಲವು ಶಬ್ದಗಳು ನಮ್ಮ ಜೀವನವನ್ನು ಹಾಳು ಮಾಡುತ್ತವೆ. ಸಾಧಕನಿಗೆ ವಿಶ್ರಾಂತಿ ಇರುವುದಿಲ್ಲ. ಅಸಾಧ್ಯ ಎನ್ನುವುದು ಆತನ ಜೀವನದಲ್ಲಿ ಇರುವುದಿಲ್ಲ. ಇಂಥ ಕೆಲವು ಶಬ್ದಗಳನ್ನು ಜೀವನದಿಂದ ಕಿತ್ತು ಎಸೆಯುವವರು ಮಾತ್ರ ಸಾಧಿಸಲು ಸಾಧ್ಯ’ ಎಂದರು.

‘ಭಗವಾಧ್ವಜಕ್ಕೆ ನಮ್ಮ ಗೌರವ’:‘ನಾವು ಗೌರವ ಕೊಟ್ಟಿರುವುದು ಭಗವಾದ್ವಜಕ್ಕೆ. ಯಾವ ವ್ಯಕ್ತಿಗೂ ಅಲ್ಲ. ಮೋದಿಯಾದಿಯಾಗಿಯೂ ಎಲ್ಲರೂ ಭಗವಾದ್ವಜದ ಅಡಿಯೇ ಕೆಲಸ ಮಾಡುತ್ತಿದ್ದಾರೆ. ನಾನು ನಿಮ್ಮ ನಾಯಕನಲ್ಲ. ನನಗೂ ಯಾರೂ ನಾಯಕರಿಲ್ಲ. ವ್ಯಕ್ತಿ ಕೇಂದ್ರಿತರಾಗಿರುವವರಿಗೆ ಇದೆಲ್ಲ ಅರ್ಥವಾಗಲ್ಲ’ ಎಂದು ವಾಗ್ದಾಳಿ ಮಾಡಿದರು.

‘ವರ್ಷಕ್ಕೆ ಎರಡು ಬಾರಿ ಕುಲದೇವರೇ ಬದಲಾಗಬೇಕಾದರೆ, ಗುರುಗಳು ಬದಲಾಗುವುದು ದೊಡ್ಡದಲ್ಲ’ ಎಂದು ಪರೋಕ್ಷವಾಗಿ ಎದುರಾಳಿಗಳನ್ನು ವ್ಯಂಗ್ಯ ಮಾಡಿದರು.

‘ಅಂತರ ಬಿಟ್ಟು ಬಿಡಿ, ಎದುರಿದ್ದವರು ಚುನಾವಣೆಗೆ ಇಟ್ಟ ಭದ್ರತಾ ಠೇವಣಿ ಸಿಗುತ್ತಾ ಎಂದು ಎದುರು ನೋಡುತ್ತಿದ್ದಾರೆ. ವಿರೋಧಿಗಳೂ ಬಲಶಾಲಿಯಾಗಿರಲಿ ಎನ್ನುವ ಆಶಯ ನಮ್ಮದು. ಅವರು ದುರ್ಬಲರಿದ್ದರೆ ಆಡಳಿತ ಮಾಡಲು ಮನಸ್ಸು ಬರುವುದಿಲ್ಲ’ ಎಂದರು.

ಶಾಸಕಿ ರೂಪಾಲಿ ನಾಯ್ಕ, ಪಕ್ಷದ ಪ್ರಮುಖರಾದ ಗಜಾನನ ಗುನಗಾ, ಮನೋಜ್ ಭಟ್, ನಯನಾ ನಿಲಾವರಕರ್, ವೆಂಕಟೇಶ ನಾಯ್ಕ, ಮಾರುತಿ ನಾಯ್ಕ, ಸುಜಾತಾ ಬಾಂದೇಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT