ಸಿದ್ದಾಪುರ: ಪಟ್ಟಣದ ಮಾರಿಕಾಂಬಾ ಚಿಕನ್, ಮಟನ್, ಮೀನು ಮಾರುಕಟ್ಟೆ ಕಟ್ಟಡದ ಮೇಲೆ ಮೊದಲ ಮಹಡಿ ನಿರ್ಮಿಸುವುದಕ್ಕೆ ಮಂಗಳವಾರ ಇಲ್ಲಿ ನಡೆದ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಪಟ್ಟಣ ಪಂಚಾಯ್ತಿ ಎಂಜಿನಿಯರ್ ರಮೇಶ ನಾಯ್ಕ, ‘ಮೊದಲ ಮಹಡಿಯಲ್ಲಿ 18 ಅಂಗಡಿಗಳನ್ನು ನಿರ್ಮಿಸಬಹುದಾಗಿದ್ದು, ₹32 ಲಕ್ಷ ವೆಚ್ಚ ಆಗಲಿದೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಜಿ.ನಾಯ್ಕ, ‘ಮಹಡಿ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಪಟ್ಟಣದ ವಿವಿಧೆಡೆ ಇರುವ ಪಟ್ಟಣ ಪಂಚಾಯ್ತಿ ಕಾಂಪ್ಲೆಕ್ಸ್ಗಳಲ್ಲಿ ದುರಸ್ತಿ, ಬಣ್ಣ ಇತ್ಯಾದಿ ಕೆಲಸಗಳಿದ್ದರೆ ಬೇರೆ ಅಂದಾಜು ಪಟ್ಟಿ ತಯಾರಿಸಬೇಕು’ ಎಂದು ಸೂಚಿಸಿದರು.
ಅರೆಂದೂರು ಸಮೀಪವಿರುವ ಫಿಲ್ಟರ್ ಹೌಸ್ ಹಾಗೂ ಜಾಕ್ವೆಲ್ ಸಮೀಪದ ವಾಲ್ಮನ್ಗಳ ವಸತಿ ಗೃಹ ದುರಸ್ತಿಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
‘ಪಟ್ಟಣದಲ್ಲಿ ನಲ್ಲಿ ಸಂಪರ್ಕವಿರುವ ಕೆಲವು ಮನೆಗಳಿಗೆ ನೀರಿನ ಪೂರೈಕೆ ಆಗುತ್ತಿಲ್ಲ. ಆದರೆ ನೀರಿನ ಬಿಲ್ ಪಾವತಿಸುತ್ತಿದ್ದಾರೆ’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಗುರುರಾಜ ಶಾನಭಾಗ ಸಭೆಯ ಗಮನ ಸೆಳೆದರು.
‘ಅಂತಹ ನಲ್ಲಿಗಳನ್ನು ಸರಿಪಡಿಸಬೇಕು. ಇನ್ಮುಂದೆ ಅಂತಹ ದೂರು ಬಾರದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸಿಬ್ಬಂದಿಗೆಕೆ.ಜಿ.ನಾಯ್ಕ ನಿರ್ದೇಶನ ನೀಡಿದರು.
‘ಪಟ್ಟಣದಲ್ಲಿ ಯಾವುದೇ ಸಮಾರಂಭ, ಕಾರ್ಯಕ್ರಮ ಇತ್ಯಾದಿಗಳ ಫ್ಲೆಕ್ಸ್ಗಳನ್ನು ಮೊದಲೇ ಎಷ್ಟು ದಿನ ಬೇಕಾದರೂ ಹಾಕಲು ಅವಕಾಶ ನೀಡಿ. ಆದರೆ ಕಾರ್ಯಕ್ರಮ ಮುಗಿದ ತಕ್ಷಣ ತೆರವು ಮಾಡಿಸಿ’ ಎಂದೂ ಅವರು ಹೇಳಿದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ರವಿಕುಮಾರ್ ನಾಯ್ಕ, ಮುಖ್ಯಾಧಿಕಾರಿ ಕುಮಾರ್ ನಾಯ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.