ಕಾರವಾರ:ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಏ.15ರಂದು ಮಧ್ಯಾಹ್ನ ಒಂದು ಗಂಟೆಗೆ ನಗರಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬರಲಿದ್ದಾರೆ. ಅಂದು ಬೆಳಿಗ್ಗೆ 11ಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಕೂಡ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಮಾಲದೇವಿ ದೇವಸ್ಥಾನದ ಮೈದಾನದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ. ಅದೇದಿನ ಕಿತ್ತೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಲಿದ್ದಾರೆ’ ಎಂದು ಹೇಳಿದರು.
‘ಪಕ್ಷದ ಮುಖಂಡರಾದ ಮಾಳವಿಕಾ ಅವಿನಾಶ್ ಏ.19ರಂದು ಶಿರಸಿ, ಯಲ್ಲಾಪುರ ಭಾಗದ ಪ್ರಚಾಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ತಾರಾ ಅನುರಾಧಾ ಏ.18 ಮತ್ತು 19 ಹಾಗೂ 20ರಂದು ಜಿಲ್ಲೆಯ ಕರಾವಳಿ ಮತ್ತು ಯಲ್ಲಾಪುರ ಭಾಗದಲ್ಲಿ ಸಂಚರಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಪಕ್ಷವು ಚುನಾವಣಾ ದಿನಾಂಕ ಪ್ರಕಟವಾಗುವ ಮೊದಲೇ ಶಕ್ತಿ ಕೇಂದ್ರಗಳಲ್ಲಿ ಸಂಘಟನೆ ಮಾಡಿಕೊಂಡಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 1,922 ಬೂತ್ಗಳಲ್ಲಿ ಮನೆ ಮನೆ ಪ್ರಚಾರದ ಮೊದಲ ಹಂತ ಮುಕ್ತಾಯವಾಗಿದೆ. ಎರಡನೇ ಹಂತದ ಪ್ರಚಾರ ಆರಂಭವಾಗಿದೆ’ ಎಂದರು.
‘ಈ ಕ್ಷೇತ್ರದಲ್ಲಿ ತಮಗೆ ಸೋಲು ಖಚಿತ ಎಂದು ಗೊತ್ತಾದ ಬಳಿಕ ಜೆಡಿಎಸ್– ಕಾಂಗ್ರೆಸ್ ಮುಖಂಡರು ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಎಲ್ಲದಕ್ಕೂ ಮತದಾರರು ಉತ್ತರ ಕೊಡುತ್ತಾರೆ’ ಎಂದು ಹೇಳಿದರು.
ಪಕ್ಷದ ಜಿಲ್ಲಾ ಘಟಕದ ವಕ್ತಾರ ರಾಜೇಶ್ ನಾಯ್ಕ, ಮುಖಂಡರಾದ ರಾಜೇಶ್ ನಾಯ್ಕ ಸಿದ್ದರ, ಮಾರುತಿ ನಾಯ್ಕ, ವಿನಾಯಕ ಹೆಗಡೆ, ಸತೀಶ್ ಇದ್ದರು.