ಕಾರವಾರ: ಒಂದೇ ವಾರದಲ್ಲಿಮೀನು ಮತ್ತು ತರಕಾರಿ ದರಗಳಲ್ಲಿ ಹಲವು ಏರುಪೇರು ಕಂಡುಬಂದಿವೆ. ಕ್ಯಾರೆಟ್ ದುಪ್ಪಟ್ಟು ಏರಿಕೆ ಕಂಡು ಗ್ರಾಹಕರಿಗೆ ಬಿಸಿ ಮುಟ್ಟಿಸಿದರೆ, ಪಾಂಫ್ರೆಟ್ ಮೀನು ದರದಲ್ಲಿ ಇಳಿಕೆ ಕಂಡು ಮೀನು ಪ್ರಿಯರಿಗೆ ಸಂತಸ ಮೂಡಿಸಿದೆ.
ಪ್ರತಿ ಕೆ.ಜಿ.ಗೆ ₹ 70ರಲ್ಲಿ ಬಿಕರಿಯಾಗುತ್ತಿದ್ದ ಕ್ಯಾರೆಟ್ದರವು₹ 50ರಷ್ಟು ಜಾಸ್ತಿಯಾಗಿದ್ದುಸದ್ಯ ₹ 120 ದರದಲ್ಲಿ ಗ್ರಾಹಕರು ಕೊಂಡುಕೊಳ್ಳುತ್ತಿದ್ದಾರೆ. ಒಂದೇ ವಾರದಲ್ಲಿ ಇದರ ಬೆಲೆ ದಿಢೀರ್ ಏರಿಕೆಯಾಗಿದೆ. ಆವಕ ಕಡಿಮೆಯಾಗಿರುವುದೇ ದರ ಏರಿಕೆಗೆ ಕಾರಣ ಎನ್ನಲಾಗಿದೆ. ಪ್ರತಿ ಕೆ.ಜಿ.ಗೆ ₹ 60ರಲ್ಲಿ ಬಿಕರಿಯಾಗುತ್ತಿದ್ದ ಕ್ಯಾಪ್ಸಿಕಂ ಈಗ₹ 80ರಲ್ಲಿ ಮಾರಾಟವಾಗುತ್ತಿದೆ. ಅಂದರೆ₹ 20ರಷ್ಟು ಬೆಲೆ ಏರಿಕೆ ಕಂಡಿದೆ. ಹಿಂದಿನ ವಾರ ತುಟ್ಟಿಯಾಗಿದ್ದ ಈರುಳ್ಳಿ ದರವು ಸದ್ಯ ಸ್ಥಿರವಾಗಿದೆ. ಪ್ರತಿ ಕೆ.ಜಿ.ಗೆ₹ 60 ದರ ಹೊಂದಿದೆ. ಬೀಟ್ರೂಟ್₹ 10ರಷ್ಟು ಏರಿಕೆ ಕಂಡು₹ 50ರ ದರದಲ್ಲಿ ಬಿಕರಿಯಾಗುತ್ತಿದೆ.
ಶುಂಠಿ, ಮೆಣಸಿನಕಾಯಿ ಇಳಿಕೆ: ತರಕಾರಿದರವು ವಾರದಿಂದ ವಾರಕ್ಕೆ ಏರಿಕೆ ಕಾಣುತ್ತಿರುವಚಿಂತೆಯ ನಡುವೆ, ಕೆಲವೊಂದರ ಬೆಲೆ ಇಳಿಕೆಯು ಗ್ರಾಹಕರಲ್ಲಿ ಸಮಾಧಾನ ತಂದಿದೆ. ಪ್ರತಿ ಕೆ.ಜಿ.ಗೆ ₹ 60ರ ದರವನ್ನು ಹೊಂದಿದ್ದ ಮೆಣಸಿನ ಕಾಯಿ₹ 40ಕ್ಕೆ ಇಳಿದಿದೆ. ಕೆ.ಜಿ.ಗೆ₹ 120ರಲ್ಲಿ ಮಾರಾಟವಾಗುತ್ತಿದ್ದ ಶುಂಠಿ₹ 80ಕ್ಕೆ ಕುಸಿದಿದೆ. ಅಂದರೆ ದರದಲ್ಲಿ ಇವು ತಲಾ₹ 20,₹ 40ರಷ್ಟು ಇಳಿಕೆ ಕಂಡಿದೆ. ಅಚ್ಚರಿಯ ಏರಿಕೆ ಕಂಡಿದ್ದ ಬೀನ್ಸ್ ಪ್ರತಿ ಕೆ.ಜಿ.ಗೆ₹ 80ರಲ್ಲಿ ಬಿಕರಿಯಾಗುತ್ತಿತ್ತು. ಅದು ಈಗ₹ 20ರಷ್ಟು ಇಳಿಕೆಯಾಗಿ₹ 60ರಲ್ಲಿ ಗ್ರಾಹಕರ ಕೈ ಸೇರುತ್ತಿದೆ. ನುಗ್ಗೆಕಾಯಿಯು ಮಾರುಕಟ್ಟೆಗೆ ಆವಕಗೊಂಡಿದ್ದುಪ್ರತಿ ಕೆ.ಜಿ.ಗೆ ₹ 350ರ ದರ ಹೊಂದಿದೆ.
ಪಾಂಫ್ರೆಟ್ ಮೀನಿನ ದರ ಇಳಿಕೆ: ಒಂದೇ ಬಾರಿಗೆ₹ 300ರಷ್ಟು ಏರಿಕೆ ಕಂಡು ಪ್ರತಿ ಕೆ.ಜಿ.ಗೆ₹ 900ರಷ್ಟು ಹೊಂದಿದ್ದ ಪಾಂಫ್ರೆಟ್ ಮೀನು, ಸದ್ಯ ದರದಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಪ್ರತಿ ಕೆ.ಜಿ.ಗೆ₹ 600ರಲ್ಲಿ ಸಿಗುತ್ತಿದೆ. ಬಂಗಡೆ ಮೀನು₹ 100ಕ್ಕೆ ಆರರಿಂದ ಏಳು ಸಿಗುತ್ತಿವೆ. ಸಣ್ಣ ಮೀನು ಒಂದು ಪಾಲಿಗೆ₹ 300 ಹಾಗೂ ದೊಡ್ಡ ಮೀನು ಒಂದು ಪಾಲಿಗೆ ₹ 700ರಲ್ಲಿ ಬಿಕರಿಯಾಗುತ್ತಿದ್ದ ತೋರ ಮೀನಿನ ದರ ಇಳಿಕೆಯಾಗಿದೆ. ತಲಾ₹ 200 ಹಾಗೂ₹ 500ರಲ್ಲಿ ಮಾರಾಟ ಕಾಣುತ್ತಿದೆ.
ಲೆಪ್ಪೆ, ಶೆಟ್ಲೆ, ಬೆಳುಂಜೆ ಮೀನುಗಳ ದರವಾಗಿ ಸ್ಥಿರವಾಗಿದೆ. ಇವುಗಳು ಒಂದು ಪಾಲಿಗೆ ತಲಾ₹ 50,₹ 100 ಹಾಗೂ₹ 100ರ ದರವನ್ನು ಹೊಂದಿವೆ.
ಕಾರವಾರ ಮಾರುಕಟ್ಟೆ
ತರಕಾರಿ | ದರ (₹ಗಳಲ್ಲಿ) |
ನುಗ್ಗೆಕಾಯಿ | 350 |
ತೊಂಡೆಕಾಯಿ | 50 |
ಆಲೂಗಡ್ಡೆ | 30 |
ಶುಂಠಿ | 80 |
ಬೀನ್ಸ್ | 60 |
ಸೌತೆಕಾಯಿ | 40 |
ಬೆಂಡೆಕಾಯಿ | 60 |
ಟೊಮೆಟೊ | 50 |
ಮೆಣಸಿನಕಾಯಿ | 40 |
ಬೀಟ್ರೂಟ್ | 50 |
ಹೂಕೋಸು | 40 |
ಕ್ಯಾಪ್ಸಿಕಂ | 80 |
ಬದನೆಕಾಯಿ | 80 |
ಕ್ಯಾರೆಟ್ | 120 |
ಕ್ಯಾಬೇಜ್ | 40 |
ಬೆಳ್ಳುಳ್ಳಿ | 200 |
**
ತರಕಾರಿ ಒಯ್ಯಲು ಬಂದಾಗ ಕ್ಯಾರೆಟ್ ಖರೀದಿಸುವುದು ಸಾಮಾನ್ಯ. ನಮಗೆ ನೆಚ್ಚಿನ ತರಕಾರಿ ಇದು. ಬೆಲೆ ಅನಿರೀಕ್ಷಿತ ಏರಿಕೆ ಕಂಡಿರುವುದು ತಲೆಬಿಸಿಯಾಗಿದೆ.
-ನಿತ್ಯಾನಂದ ಭಟ್ಟ,ಗ್ರಾಹಕ
**
ಮೀನಿನ ಬೆಲೆ ಇಳಿಕೆ ಕಂಡಿರುವುದು ಗ್ರಾಹಕರಲ್ಲಿ ಮಂದಹಾಸ ಮೂಡಿಸಿರಬಹುದು. ಆದರೆ, ದಿನೇ ದಿನೇ ದರದಲ್ಲಿ ವ್ಯತ್ಯಾಸ ಆಗುತ್ತಿರುವುದರಿಂದ ನಮಗೆ ನಷ್ಟವಾಗುತ್ತಿದೆ.
-ಭಾರತಿ ಹರಿಕಂತ್ರ,ಮೀನು ವ್ಯಾಪಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.