ಶಿರಸಿ: ಕೋವಿಡ್ ಕಾರಣಕ್ಕೆ ಕಳೆದ ಇಪ್ಪತ್ತು ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಧ್ಯಾಹ್ನದ ಬಿಸಿಯೂಟ ಗುರುವಾರ ಶಾಲೆಗಳಲ್ಲಿ ಪುನರಾರಂಭಗೊಂಡಿತು.
ದಸರಾ ರಜೆ ಕಳೆದು ತರಗತಿ ಆರಂಭಗೊಂಡ ದಿನ ವಿದ್ಯಾರ್ಥಿಗಳಿಗೆ ಸಿಹಿ ತಿನಿಸಿನೊಂದಿಗೆ ಊಟ ನೀಡಲಾಗಿದ್ದು, ಪರಸ್ಪರ ದೈಹಿಕ ಅಂತರ ಪಾಲಿಸಿ ಮಕ್ಕಳು ಊಟ ಸವಿದರು. ಗ್ರಾಮೀಣ ಭಾಗದಲ್ಲಿ ಅಕ್ಷರ ದಾಸೋಹ ಸಿಬ್ಬಂದಿ ಅಡುಗೆ ಮಾಡಿದರೆ, ನಗರ ವ್ಯಾಪ್ತಿಯ ಶಾಲೆಗಳಿಗೆ ಖಾಸಗಿ ಸಂಸ್ಥೆ ಊಟ ಪೂರೈಸಿತು.
ತಾಲ್ಲೂಕಿನಲ್ಲಿ ಮೊದಲ ದಿನ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಸಿಯೂಟ ಸ್ವೀಕರಿಸಿದರು. ಸಾವಿರಾರು ವಿದ್ಯಾರ್ಥಿಗಳು ಮನೆಯಿಂದಲೇ ಊಟ ತಂದಿದ್ದರು.
2020ರ ಮಾರ್ಚ್ ಬಳಿಕ ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತಗೊಂಡಿತ್ತು. ವಿದ್ಯಾರ್ಥಿಗಳಿಗೆ ಬೇಳೆಕಾಳುಗಳನ್ನು ಮನೆಗೆ ಪೂರೈಸಲಾಗಿತ್ತು. ಕೆಲ ತಿಂಗಳಿನಿಂದ ಶಾಲೆ ಆರಂಭಗೊಂಡಿತ್ತಾದರೂ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಬಿಸಿಯೂಟ ತಯಾರಿ ನಡೆದಿರಲಿಲ್ಲ.
‘ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿ ಗಮನದಲ್ಲಿಟ್ಟು ಬಿಸಿಯೂಟ ಯೋಜನೆ ಆರಂಭಿಸಲಾಗಿದೆ. ಸ್ವಚ್ಛತೆ, ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಕೋವಿಡ್ ನಿಯಮ ಪಾಲಿಸಲು ಅಡುಗೆ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ಬಿಇಓ ಎಂ.ಎಸ್.ಹೆಗಡೆ ಪ್ರತಿಕ್ರಿಯಿಸಿದ್ದಾರೆ.