ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗದ ಕೊರತೆಯಿಂದ ಬಳಲಿದ ಬಡವ!

ಕರಾವಳಿಯಲ್ಲಿ ಬಡಾವಣೆ, ವಸತಿ ಯೋಜನೆಗೆ ಸ್ಥಳಾಭಾವ: ಬೇಡಿಕೆ ಹೆಚ್ಚು, ದರ ಕೈಗೆಟುಕದಷ್ಟು
Last Updated 9 ನವೆಂಬರ್ 2020, 20:15 IST
ಅಕ್ಷರ ಗಾತ್ರ

ಕಾರವಾರ: ತಲೆಯ ಮೇಲೊಂದು ಸ್ವಂತದ ಸೂರು ಇರಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ, ಈಗಿನ ದುಬಾರಿ ದಿನಗಳಲ್ಲಿ ಮನೆಯಿರಲಿ, ಒಂದು ನಿವೇಶನ ಕೊಳ್ಳುವುದೂ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ದೂರದ ಮಾತೇ ಸರಿ.

ನಗರ, ಪಟ್ಟಣಗಳಲ್ಲಿ ಕೂಲಿ, ನೌಕರಿ ಮಾಡಿಕೊಂಡು ಜೀವನ ಮಾಡುವ ಮಂದಿಗೆ ಪ್ರತಿ ತಿಂಗಳು ಬಾಡಿಗೆ ಪಾವತಿಸುವಾಗಲೂ ಸ್ವಂತ ಸೂರಿನ ವಿಚಾರ ತಲೆಯಲ್ಲಿ ಮೂಡುತ್ತದೆ. ಸರ್ಕಾರದ ವಿವಿಧ ಯೋಜನೆಗಳು, ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳ ಮೂಲಕವಾದರೂ ಒಂದು ಮನೆ ಸಿಗಲಿ ಎಂದು ಆಸೆ ಕಂಗಳಲ್ಲಿ ನೋಡುವ ಬಹುಪಾಲು ಜನರಿಗೆ ನಿರಾಸೆಯೇ ಆಗಿದೆ.

ಜಿಲ್ಲಾ ಕೇಂದ್ರ ಕಾರವಾರದಲ್ಲಿ ಅಭಿವೃದ್ಧಿ ಪ್ರಾಧಿಕಾರವಿದೆ (ಕೆ.ಡಿ.ಎ). 1988ರಲ್ಲೇ ಇದರ ರಚನೆಯಾದರೂ ಈವರೆಗೆ ಒಂದೇ ಒಂದು ನಿವೇಶನವನ್ನು ಯಾರಿಗೂ ಮಂಜೂರು ಮಾಡಿಲ್ಲ. ಒಂದು ಕಡೆ ಸಮುದ್ರ, ಮತ್ತೊಂದೆಡೆ ಬೆಟ್ಟ ಗುಡ್ಡಗಳಿಂದ ಕೂಡಿದ ದಟ್ಟವಾದ ಕಾಡು ಇರುವ ಕಾರವಾರದಲ್ಲಿ ಬಡಾವಣೆ ನಿರ್ಮಿಸಲು ಜಾಗದ ಕೊರತೆಯೇ ಇದಕ್ಕೆ ಕಾರಣವಾಗಿದೆ. ಕೆಲವು ವರ್ಷಗಳಿಂದ ಕರಾವಳಿ ನಿಯಂತ್ರಣ ವಲಯದ (ಸಿ.ಆರ್.ಝೆಡ್) ನಿಯಮಗಳೂ ಇದಕ್ಕೆ ಒಂದಷ್ಟು ಕೊಡುಗೆ ನೀಡಿವೆ.

ಹೊರ ವಲಯದಲ್ಲಿ ಪ್ರಯತ್ನಿಸಬಹುದು:ಕಾರವಾರದಲ್ಲಿ ಸ್ಥಳಾಭಾವ ಇರುವ ಕಾರಣ ಕೆ.ಡಿ.ಎ. ನಗರದ ಸಮೀಪದಲ್ಲೇ ಇರುವ ಗ್ರಾಮಗಳಲ್ಲಿ ಬಡಾವಣೆ ನಿರ್ಮಾಣಕ್ಕೆ ಯತ್ನಿಸಬಹುದು. ಆದರೆ, ಆ ಪ್ರಯತ್ನಗಳು ಗಂಭೀರವಾಗಿ ಆಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಯೊಬ್ಬರು.

‘ಕಾರವಾರ ನಗರ ಸಭೆಯ ವ್ಯಾಪ್ತಿಯನ್ನು ವಿಸ್ತರಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು. ಸುತ್ತಮುತ್ತ ಇರುವ 10 ಗ್ರಾಮ ಪಂಚಾಯ್ತಿಗಳನ್ನು ನಗರಸಭೆಯ ವ್ಯಾಪ್ತಿಗೆ ತರಬೇಕು. ಚೆಂಡಿಯಾ, ಅರಗಾ, ಮಕ್ಕೇರಿ, ಕಡವಾಡ, ಚಿತ್ತಾಕುಲಾ... ಈ ರೀತಿ ಸಮೀಪದ ಗ್ರಾಮಗಳಲ್ಲಿ ಬಡಾವಣೆ ನಿರ್ಮಾಣ ಮಾಡಿ ಬಡವರಿಗೆ ಸೂರು, ನಿವೇಶನ ಸಿಗುವಂತೆ ಮಾಡಬಹುದು’ ಎನ್ನುವುದು ಅವರ ಅನಿಸಿಕೆಯಾಗಿದೆ.

‘2018ರಲ್ಲಿ ರಾಜ್ಯ ಸರ್ಕಾರ ಬದಲಾದ ಸಂದರ್ಭದಲ್ಲಿ ಕೆ.ಡಿ.ಎ ಅಧ್ಯಕ್ಷರನ್ನೂ ಹಿಂಪಡೆಯಲಾಯಿತು. ಅದಾದ ಬಳಿಕ ಹೊಸಬರನ್ನು ಆಯ್ಕೆ ಮಾಡಿಲ್ಲ. ಹಾಗಾಗಿ ಎರಡು ವರ್ಷಗಳಿಂದ ಜಿಲ್ಲಾಧಿಕಾರಿಯೇ ಅದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪೂರ್ಣ ಪ್ರಮಾಣದ ಆಡಳಿತ ಇಲ್ಲದಿದ್ದರೆ ಇಂಥ ಸಂಸ್ಥೆಗಳ ಇತರ ಸಿಬ್ಬಂದಿಯ ಮೇಲೆ ವಿಪರೀತ ಹೊರೆಯಾಗುತ್ತದೆ. ಅಗತ್ಯ ಕೆಲಸಗಳು ಆಗುವುದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

‘ನಗರದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವುದು ಎಂದರೆ ಈಗಿನ ಸ್ಥಿತಿಯಲ್ಲಿ ಕನಸಲ್ಲೂ ಕಷ್ಟದ ಮಾತಾಗಿದೆ. ಕೆ.ಡಿ.ಎ.ದಿಂದ ಅಥವಾ ಸರ್ಕಾರದ ಯೋಜನೆಗಳಿಂದ ಮನೆ ಸಿಗಬಹುದು ಎಂದು ಕಾಯುತ್ತ ಕೂತಿದ್ದೇ ಬಂತು. ಯಾವುದೇ ಪ್ರಯೋಜನವಾಗಿಲ್ಲ. ಬಹುಶಃ ನನ್ನ ಕೊನೆಯ ದಿನಗಳವರೆಗೂ ಬಾಡಿಗೆ ಮನೆಯಲ್ಲೇ ಇರಬೇಕು ಎಂದು ಹಣೆಬರಹದಲ್ಲಿದೆ ಎಂದು ಕಾಣುತ್ತದೆ’ ಎನ್ನುತ್ತ ವಿಷಾದದಿಂದ ನಕ್ಕವರು ಕೆ.ಇ.ಬಿ ರಸ್ತೆಯ ರಮೇಶ ನಾಯ್ಕ.

ಜಿಲ್ಲೆಯ ಇತರ ನಗರ, ಪಟ್ಟಣಗಳಲ್ಲಿ:ಬಡವರಿಗೆ ಸೂರು ಒದಗಿಸುವ ವಿಚಾರದಲ್ಲಿ ದಾಂಡೇಲಿ ನಗರಸಭೆ ಮತ್ತು ಹಳಿಯಾಳ ಪುರಸಭೆ ಒಂದು ಹೆಜ್ಜೆ ಮುಂದೆ ಹೋಗಿವೆ. ಅಲ್ಲಿ ಮೊದಲೇ ಗುರುತಿಸಿದ್ದ ಫಲಾನುಭವಿಗಳಿಗೆ ‘ಸರ್ವರಿಗೂ ಸೂರು’ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಲಾಗಿದೆ.

ದಾಂಡೇಲಿಯಲ್ಲಿ 1,100 ಮನೆಗಳ ನಿರ್ಮಾಣ ಪ್ರಗತಿಯಲ್ಲಿವೆ. 756 ಹೊಸ ಮನೆಗಳನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಇದೇರೀತಿ, ಹಳಿಯಾಳದಲ್ಲಿ 280 ಮನೆಗಳ ಕಾಮಗಾರಿ ಪ್ರಗತಿಯಲ್ಲಿದ್ದರೆ, ಹೆಚ್ಚುವರಿಯಾಗಿ 560 ಮನೆಗಳ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಯಲ್ಲಾಪುರದಲ್ಲಿ 2,000 ಮನೆಗಳ ನಿರ್ಮಾಣಕ್ಕೆ ಯೋಜನಾ ವರದಿ ಸಿದ್ಧವಾಗುತ್ತಿದೆ. ಅದೇರೀತಿ, ಮುಂಡಗೋಡ ಪಟ್ಟಣದಲ್ಲೂ ನಿರ್ಮಾಣಕ್ಕೆ ಪ್ರಸ್ತಾವದ ಹಂತದಲ್ಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕಾರವಾರದಲ್ಲಿ ಕೆ.ಇ.ಬಿ ಬಳಿ ವಸತಿ ಸಮುಚ್ಛಯಗಳನ್ನು ನಿರ್ಮಿಸಿದರೆ, 85 ಮನೆಗಳನ್ನು ಹಳಬರಿಗೆ ನೀಡಬಹುದು. ಮಿಕ್ಕಿದ್ದನ್ನು ಹೊಸ ಫಲಾನುಭವಿಗಳಿಗೆ ಹಂಚಲು ಸಾಧ್ಯವಿದೆ’ ಎನ್ನುವ ಸಲಹೆ ಅವರದ್ದು.

‘ಹೊಸ ಪ್ರಸ್ತಾವಗಳಿಲ್ಲ’:‘ಕರ್ನಾಟಕ ಗೃಹ ಮಂಡಳಿಯಿಂದ ಎರಡು ಬಡಾವಣೆಗಳನ್ನು ಹೊರತು ಪಡಿಸಿ ಸರ್ಕಾರದಿಂದ ದೊಡ್ಡ ವಸತಿ ಯೋಜನೆಗಳನ್ನು ಕಾರವಾರದಲ್ಲಿ ಜಾರಿ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಜಾಗದ ಕೊರತೆ ಮುಖ್ಯ ಕಾರಣ. ಕೆ.ಡಿ.ಎ ಅಥವಾ ಮತ್ಯಾವುದೇ ಸಂಸ್ಥೆಗಳಿಂದ ಹೊಸ ಬಡಾವಣೆಗಳ ನಿರ್ಮಾಣದ ಬಗ್ಗೆ ಹೊಸ ಪ್ರಸ್ತಾವಗಳು ಬಂದಿಲ್ಲ’ ಎನ್ನುತ್ತಾರೆ ನಗರಸಭೆ ಪ್ರಭಾರ ಆಯುಕ್ತೆ ಎಂ.ಪ್ರಿಯಾಂಗಾ.

‘ವಸತಿ ಯೋಜನೆಗೆ ಸಂಬಂಧಿಸಿ 200 ಮಂದಿ ಕಡುಬಡವರನ್ನು ಗುರುತಿಸಬೇಕು ಎಂದು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಸೂಚನೆ ಬಂದಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಜಾಗ ಗುರುತಿಸುವುದು ಮತ್ತು ಇದನ್ನು ಜಾರಿ ಮಾಡುವವರ ಬಗ್ಗೆ ಸ್ಪಷ್ಟನೆ ಕೇಳಿದ್ದೇವೆ. ಈ ಬಗ್ಗೆ ಸೂಚನೆಗಾಗಿ ಕಾಯುತ್ತಿದ್ದೇವೆ’ ಎಂದು ತಿಳಿಸಿದರು.

‘ಜಾಗ ಯಾಕೆ ಮೀಸಲು?’:ಕಾರವಾರದಂತಹ ನಗರದಲ್ಲೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವಾಗ ಉದ್ಯಾನದ ಸಲುವಾಗಿ ಮತ್ತಷ್ಟು ಜಾಗವನ್ನು ಯಾಕೆ ಮೀಸಲಿಡಬೇಕು ಎನ್ನುವುದು ಹಲವರ ಪ್ರಶ್ನೆ.

‘ಇಲ್ಲಿ ನದಿ, ಕಾಡು, ಸಮುದ್ರ ಇವೆ. ಉದ್ಯಾನದ ಅಭಿವೃದ್ಧಿಗೆಂದು ಶುಲ್ಕ ಪಡೆದುಕೊಳ್ಳಲಿ. ಆದರೆ, ಆ ಜಾಗವನ್ನು ಬಳಕೆ ಮಾಡಲು ಅವಕಾಶ ನೀಡಬೇಕು’ ಎನ್ನುತ್ತಾರೆ ಕಾರವಾರದ ಸಿವಿಲ್ ಎಂಜಿನಿಯರ್ ಕೃಷ್ಣಾನಂದ ಬಾಂದೇಕರ್. ‘ನಗರದಲ್ಲಿ ಕೆ.ಎಚ್.ಬಿ.ಯ ಎರಡು, ನಗರಸಭೆಯ ಒಂದು ಹಾಗೂ ಎರಡು ಖಾಸಗಿ ಬಡಾವಣೆಗಳಿವೆ. ಕೆ.ಎಚ್.ಬಿ.ಯವರು ಹಣಕೋಣದಲ್ಲಿ ಬಡಾವಣೆ ಮಾಡುವುದಾಗಿ ಅರ್ಜಿ ಆಹ್ವಾನಿಸಿದಾಗ ಸಾಕಷ್ಟು ಮಂದಿ ಆಸಕ್ತಿ ತೋರಿಸಿದರು. ಆದರೆ, ಆ ಯೋಜನೆ ಜಾರಿಯಾಗಲೇ ಇಲ್ಲ’ ಎನ್ನುತ್ತಾರೆ ಅವರು.

‘ಅನುದಾನ ಸಿಗಲಿಲ್ಲ’:‘ನಗರಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಕೆಲಸವೇ ಬಡಾವಣೆಗಳನ್ನು ನಿರ್ಮಿಸುವುದು. ಆದರೆ, ಇಲ್ಲಿ ಸ್ಥಳಾಭಾವದಿಂದ ಇದಾಗುತ್ತಿಲ್ಲ’ ಎನ್ನುತ್ತಾರೆ ಕೆ.ಡಿ.ಎ ಮಾಜಿ ಅಧ್ಯಕ್ಷರೂ ಆಗಿರುವ ಕಾರವಾರ ನಗರಸಭೆ ಸದಸ್ಯ ಸಂದೀಪ ತಳೇಕರ್.

‘ಪ್ರಾಧಿಕಾರ ರಚನೆಯಾದಾಗ ಸರ್ಕಾರವು ಅನುದಾನ ನೀಡಲಿಲ್ಲ. ಜೊತೆಗೇ ಜಾಗ ಸಿಕ್ಕಿದ್ದರೆ ಸಾಲ ಮಾಡಿಯಾದರೂ ಕೆ.ಡಿ.ಎ. ಬಡಾವಣೆ ನಿರ್ಮಿಸಬಹುದಿತ್ತು. ಅಸ್ನೋಟಿ ಬಳಿ ಕೊಳಗೆಯಲ್ಲಿ ಬಡಾವಣೆ ನಿರ್ಮಿಸಲು ಪ್ರಯತ್ನಿಸಲಾಗಿತ್ತು. ಆದರೆ, ಅದೂ ಪ್ರಗತಿ ಕಾಣಲಿಲ್ಲ. ಇನ್ನು, ನಗರಸಭೆಯೇ ಜಮೀನು ಖರೀದಿಸಿ ಬಡವರಿಗೆ ಹಂಚುವ ಯೋಜನೆಯಿದೆ. ಆದರೆ, ಅದಕ್ಕೆ ಸರ್ಕಾರವು ನಿಗದಿಪಡಿಸಿದ ಪರಿಹಾರ ಮೊತ್ತ ಅತ್ಯಂತ ಕಡಿಮೆ. ಹಾಗಾಗಿ ಇದೂ ಅಡಚಣೆಯಾಗಿದೆ’ ಎಂದು ಅವರು ವಿವರಿಸುತ್ತಾರೆ.

ಕಾರವಾರದಲ್ಲಿ ಆಸ್ತಿ: ಅಂಕಿ ಅಂಶ

* ನಗರಸಭೆ ವ್ಯಾಪ್ತಿಯಲ್ಲಿರುವ ಒಟ್ಟು ಆಸ್ತಿ:25 ಸಾವಿರ

* ಅಧಿಕೃತ ಮನೆಗಳು:19 ಸಾವಿರ

* ವಾಣಿಜ್ಯ ಕಟ್ಟಡಗಳು:1,800

* ಖಾಲಿ ನಿವೇಶನಗಳು:3,500

* ಮನೆ ಮಂಜೂರಿಗೆ ಸಲ್ಲಿಕೆಯಾದ ಅರ್ಜಿಗಳು:700ಕ್ಕೂ ಹೆಚ್ಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT