ಶಿರಸಿ: ಮಾತೆಯರನ್ನು ಪೂಜ್ಯ ಭಾವನೆಯಿಂದ ನೋಡುವ ನೆಲದಲ್ಲಿ ಸದಾ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ ಎಂದು ಕರ್ಕಿ ದೈವಜ್ಞ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ನುಡಿದರು.
ಅಖಿಲ ಭಾರತೀಯ ದೈವಜ್ಞ ಬ್ರಾಹ್ಮಣ ಸಮಾಜೋನ್ನತಿ ಪರಿಷದ್, ಮಹಿಳಾ ವಿಭಾಗ ಮುಂಬೈ, ತಾಲ್ಲೂಕು ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಜಂಟಿಯಾಗಿ ಶನಿವಾರದಿಂದ ಎರಡು ದಿನಗಳ ಕಾಲ ಆಯೋಜಿಸಿರುವ ರಾಷ್ಟ್ರ ಮಟ್ಟದ ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶ ಉದ್ಘಾಟಿಸಿ, ಅವರು ಮಾತನಾಡಿದರು.
ಮಾತೆಯರು ಸಮಾಧಾನದಿಂದ ಇದ್ದರೆ, ಇಡೀ ಕುಟುಂಬ ಸಂತೋಷದಿಂದ ಇರುತ್ತದೆ. ಎಲ್ಲೆಡೆ ಇದೇ ವಾತಾವರಣ ಸೃಷ್ಟಿಯಾದಲ್ಲಿ ವಿಶ್ವದೆಲ್ಲೆಡೆ ಸಂತಸ ತುಂಬಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಕ್ರೌರ್ಯ ಹೆಚ್ಚಾಗುತ್ತಿದೆ. ಈ ಕೆಟ್ಟ ಮಾನಸಿಕತೆ ಸಮಾಜದಿಂದ ದೂರವಾಗಬೇಕು. ಮಕ್ಕಳಿಗೆ ಚಿಕ್ಕಂದಿನಲ್ಲಿ ವಿದ್ಯೆ ನೀಡುವ ಜತೆಗೆ, ಸಂಸ್ಕಾರವನ್ನೂ ನೀಡಬೇಕು. ಇದು ಭವಿಷ್ಯಕ್ಕೆ ಬುನಾದಿಯಾಗುತ್ತದೆ. ಸಂಸ್ಕಾರ ಹೊಂದಿದವರು ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಕಿವಿಮಾತು ಹೇಳಿದರು.
ಅಖಿಲ ಭಾರತೀಯ ದೈವಜ್ಞ ಬ್ರಾಹ್ಮಣ ಸಮಾಜೋನ್ನತಿ ಪರಿಷದ್ ಅಧ್ಯಕ್ಷ ದಿನಕರ ಬೈಕೇರಿಕರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಉಪಕುಲಪತಿ ಡಾ. ಸುಧಾರಾವ್ ಮಾತನಾಡಿ, ‘ದೈವಜ್ಞ ಸಮಾಜದ ಜನರು ದೇಶದಾದ್ಯಂತ ಪಸರಿಸಿದ್ದಾರೆ. ಆದರೆ, ಅವರ ಆಚಾರ, ವಿಚಾರ ಇನ್ನೂ ಒಂದೇ ತೆರನಾಗಿದೆ. ಇದೇ ಈ ಸಮುದಾಯದ ವಿಶೇಷತೆಯಾಗಿದೆ’ ಎಂದರು.
ಸಮುದಾಯದ ಪ್ರಮಖರಾದ ಗಂಗಾಧರ ಭಟ್ಟ, ರಾಮರಾವ್ ರಾಯಕರ, ವಿನಯಾ ರಾಯಕರ, ಆನಂದ ಪೆಡ್ನೇಕರ್, ಮಡಗಾಂವದ ಉಪವಿಭಾಗಾಧಿಕಾರಿ ರಾಘವೇಂದ್ರ ರಾಯಕರ, ಉಮೇಶ ಶೇಟ್, ಚಂದ್ರಶೇಖರ ದಾಬೋಲ್ಕರ್, ಸುನೀತಾ ಬೈಕೇರಿಕರ್, ಆರತಿ ಮಾಲ್ಡೀಕರ್, ಗೋಪಾಲಕೃಷ್ಣ ವೆರ್ಣೇಕರ್, ಸಮಾವೇಶದ ಸಂಚಾಲಕ ಸುಧಾಕರ ರಾಯಕರ ಉಪಸ್ಥಿತರಿದ್ದರು. ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ಸಂಧ್ಯಾ ಕುರ್ಡೇಕರ್ ಸ್ವಾಗತಿಸಿದರು. ಶಾಂತಲಾ ಕುರ್ಡೇಕರ್, ಪ್ರಿಯಾಂಕಾ ಕುರ್ಡೇಕರ್ ನಿರೂಪಿಸಿದರು. ವಿನೋದಾ ಶೇಟ್ ವಂದಿಸಿದರು.
ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ, ಗುಜರಾತ್, ಆಂಧ್ರಪ್ರದೇಶ ಮೊದಲಾದ ರಾಜ್ಯಗಳಲ್ಲಿ ನೆಲೆಸಿರುವ ದೈವಜ್ಞ ಸಮುದಾಯದ ಜನರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.