ಮುಂಡಗೋಡ: ‘ಭಾರತೀಯ ಪುರಾತನ ಸಂಸ್ಕೃತಿ ಹಾಗೂ ಪರಂಪರೆಯು ವಿಶ್ವಕ್ಕೆ ಮಾದರಿ ಆಗಿದೆ. ಸತ್ಯ, ಅಹಿಂಸೆ ಹಾಗೂ ಕರುಣೆಯು ಜಗತ್ತಿಗೆ ನೀಡಿದ ಕೊಡುಗೆ ಆಗಿದೆ’ ಎಂದು ಟಿಬೆಟನ್ ಧರ್ಮಗುರು ದಲೈಲಾಮಾ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಟಿಬೆಟನ್ ಕ್ಯಾಂಪ್ ನಂ.6ರಲ್ಲಿ ನೂತನವಾಗಿ ನಿರ್ಮಿಸಿರುವ ಡ್ರೆಪುಂಗ್ ಗೋಮಾಂಗ್ ಚರ್ಚಾ ಸಭಾಂಗಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಬೌದ್ಧ ಅಧ್ಯಯನ ನಿರಂತರವಾಗಿದ್ದರೆ ಮಾತ್ರ ಮುಂದಿನ ಶತಮಾನದವರೆಗೆ ಬೌದ್ಧ ಧರ್ಮದ ಪರಂಪರೆಯನ್ನು ಪಸರಿಸಲು ಸಾಧ್ಯ.ಶತಮಾನಗಳಿಂದ ಜಾರಿಯಲ್ಲಿರುವ ನಳಂದ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವ ಬಗ್ಗೆ
ಹೆಮ್ಮೆಯಿದೆ’ಎಂದು ಹೇಳಿದರು.
‘ನಿರಂತರ ಹಾಗೂ ಪ್ರಾಮಾಣಿಕ ಅಧ್ಯಯನ ಮಾತ್ರ ಸತ್ಯದ ಕಡೆ ದಾರಿ ತೋರಿಸಬಲ್ಲದು. ಬೌದ್ಧ ಧರ್ಮವನ್ನು 8ನೇ ಶತಮಾನದಲ್ಲಿ ಪ್ರಚುರಪಡಿಸಿದವರನ್ನು ಮರೆಯಲು ಸಾಧ್ಯವಿಲ್ಲ. ಬೌದ್ಧ ಧರ್ಮದ ಅಭ್ಯಾಸದಲ್ಲಿ ಚರ್ಚಾ ಪಾಠದ ಶಿಕ್ಷಣಕ್ಕೆ
ಹೆಚ್ಚಿನ ಮಹತ್ವ ನೀಡಲಾಗಿದೆ’ ಎಂದರು.
‘ಧರ್ಮದ ವಿಚಾರದಲ್ಲಿಬಡಿದಾಡಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ. ಜಗತ್ತಿನಲ್ಲಿ ಕಂಡುಬರುವ ಹಿಂಸಾಚಾರವನ್ನು ತಡೆಗಟ್ಟಲು, ಮಾನವೀಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಬೆಳೆಸುವ ಅವಶ್ಯಕತೆ ಇದೆ. ಅಹಿಂಸೆಯಿಂದ ಯಾರಿಗೂ ಹಾನಿ ಆಗುವುದಿಲ್ಲ’ ಎಂದು ಒತ್ತಿ ಹೇಳಿದರು.
ಸಮಾರಂಭದಲ್ಲಿ ಮಂಗೋಲಿಯಾ, ರಷ್ಯಾ, ನೇಪಾಳ, ಭೂತಾನ ಸೇರಿದಂತೆ ವಿವಿಧ ದೇಶಗಳಿಂದ ಬೌದ್ಧ ಅನುಯಾಯಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.