ಮುಂಡಗೋಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಸೋಮವಾರ ಇಲ್ಲಿನ ಶಿವಾಜಿ ವೃತ್ತದಲ್ಲಿವಾಹನ ಸಂಚಾರತಡೆದು ಪ್ರತಿಭಟಿಸಿದರು.
‘ಇತ್ತೀಚಿನ ಅತಿವೃಷ್ಟಿಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.ಜಾನುವಾರು ಮರಣ ಹೊಂದಿವೆ. ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಕೂಡಲೇಪರಿಹಾರ ವಿತರಣೆ ಮಾಡಬೇಕು’ ಎಂದು ರೈತರು ಒತ್ತಾಯಿಸಿದರು.
ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಕಟ್ಟುಬಾಕಿ ಇರುವ ರೈತರಿಗೂ ಬೆಳೆ ಸಾಲ ನೀಡಬೇಕು. ರೈತರಿಗೆ ನೀಡುವ ಸಾಲದ ಬಡ್ಡಿ ದರವನ್ನು ಶೇ 3ರಿಂದ ಶೇ 1ಕ್ಕೆ ಇಳಿಸಬೇಕು. ಎಲ್ಲ ಸಹಕಾರ ಬ್ಯಾಂಕ್ಗಳು ಬಂಗಾರದ ಮೇಲಿನ ಸಾಲವನ್ನು ಶೇ 3ರ ಬಡ್ಡಿ ದರದಲ್ಲಿ ನೀಡಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿ ಪಡಿಸಬೇಕು. ಅತಿವೃಷ್ಟಿಯಿಂದ ಹಾನಿಗೊಳಗಾದ ಜಲಾಶಯ ಮತ್ತು ಕೆರೆಗಳ ಮರು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಿಂದ ಅರ್ಧ ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಸ್ಥಳಕ್ಕೆ ಬಂದತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮನವಿ ಸ್ವೀಕರಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಶಂಬಣ್ಣ ಕೋಳೂರ, ಶ್ರೀಧರ ಡೋರಿ, ಗುರು ರಾಯ್ಕರ, ಹನಮಂತ ಗುಡ್ಡಣ್ಣವರ್ ಹಾಜರಿದ್ದರು.