ಶಿರಸಿ: ‘ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದವರನ್ನು ಎಸಿಎಫ್ ಹಂತದಲ್ಲಿ ವಿಚಾರಣೆ ನಡೆಸಿ, ಒಕ್ಕಲೆಬ್ಬಿಸುವ ಪ್ರಯತ್ನದಿಂದ ಹಿಂದೆ ಸರಿಯಬೇಕು’ ಎಂಬ ಅರಣ್ಯ ಹಕ್ಕು ಹೋರಾಟಗಾರರ ಪಟ್ಟಿಗೆ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಸಂತರೆಡ್ಡಿ ಸ್ಪಂದಿಸಿದ್ದು, ಒಕ್ಕಲೆಬ್ಬಿಸುವ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಭರವಸೆ ನೀಡಿದರು.
ಇಲ್ಲಿನ ಸಿಸಿಎಫ್ ಕಚೇರಿಯಲ್ಲಿ ಗುರುವಾರ ಅರಣ್ಯ ಹಕ್ಕು ಹೋರಾಟಗಾರರೊಂದಿಗೆ ಸಭೆ ನಡೆಸಿದರು. ಜಿಲ್ಲೆಯ ವಿವಿಧೆಡೆಯಿಂದ ನೂರಾರು ಜನರು ಸಭೆಯಲ್ಲಿ ಭಾಗಿಯಾಗಿದ್ದರು.
ಅರಣ್ಯ ಅತಿಕ್ರಮಣದಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ‘ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶ ಉಲ್ಲಂಘಿಸುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.
‘ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದವರಿಗೂ 64ಎ ಅಡಿ ವಿಚಾರಣಾ ನೊಟೀಸ್ ನೀಡಲಾಗುತ್ತಿದೆ. ನೊಟೀಸ್ ನೀಡುವುದನ್ನು ತಕ್ಷಣ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
‘ಹೊಟ್ಟೆಪಾಡಿಗೆ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವವರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಿರುಕುಳನೀಡುವುದನ್ನು ತಪ್ಪಿಸಬೇಕು’ ಎಂದು ಜಿ.ಎಂ.ಶೆಟ್ಟಿ ಅಚವೆ ಒತ್ತಾಯಿಸಿದರು.
ಸಭೆಯಲ್ಲಿ ವನ್ಯ ಪ್ರಾಣಿ ಬೆಳೆನಷ್ಟ ನಿಯಂತ್ರಿಸುವಲ್ಲಿ ವೈಫಲ್ಯ, ಅತಿವೃಷ್ಟಿಗೆ ಹಾನಿಯಾದ ಮನೆದುರಸ್ತಿಗೆ ಅವಕಾಶ ನೀಡದಿರುವುದು, ಅರಣ್ಯ ಸಿಬ್ಬಂದಿ ದುರ್ನಡತೆ ಕುರಿತು ದೂರು ಸಲ್ಲಿಸಲಾಯಿತು.
ಸಿಸಿಎಫ್ ಕೆ.ವಸಂತ ರೆಡ್ಡಿ ಮಾತನಾಡಿ, ‘ಅರಣ್ಯ ಹಕ್ಕು ಕಾಯ್ದೆ ಸಂಬಂಧ ಸರ್ಕಾರದ ಅಂತಿಮ ಆದೇಶಜರುಗುತ್ತಿದ್ದು 15 ದಿನಗಳವರೆಗೆ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರಿಯೆ ಸ್ಥಗಿತಗೊಳಿಸಲಾಗುವುದು. ಅರಣ್ಯವಾಸಿಗಳ ದೌರ್ಜನ್ಯ ನಿಯಂತ್ರಿಸಲು ಕ್ರಮ ಜರುಗಿಸಲಾಗುವುದು. ಅಸಮರ್ಪಕ ಜಿಪಿಎಸ್ ಕಾರ್ಯದ ಕುರಿತು ಪುನರ್ ಪರಿಶೀಲಿಸಲಾಗುವುದು. 1978ರ ಪೂರ್ವದ ಕಟ್ಟಡಗಳಿದ್ದರೆ ಅವುಗಳದುರಸ್ತಿಗೆ ಅನುಮತಿಸಲಾಗುವುದು’ ಎಂದು ಭರವಸೆ ನೀಡಿದರು.
ಡಿಸಿಎಫ್ ಅಜ್ಜಯ್ಯ ಆರ್., ಎಸಿಎಫ್ ಡಿ.ರಘು, ಅಶೋಕ ಅಲಗೂರ, ಆರ್.ಎಫ್.ಒ. ಬಸವರಾಜ ಬೋಚಳ್ಳಿ ಇದ್ದರು.
ಅರಣ್ಯ ಹಕ್ಕು ಹೋರಾಟಗಾರರಾದ ರಮಾನಂದ ನಾಯ್ಕ ಅಚವೆ, ಭೀಮ್ಸಿ ವಾಲ್ಮೀಕಿ, ಶಿವಾನಂದ ಜೋಗಿ, ಸಂತೋಷ ಗಾವಡಾ, ಸಾರಂಬಿ ಶೇಖ್, ನರಸಿಂಹ ನಾಯ್ಕ, ನೇಹರೂ ನಾಯ್ಕ, ದೇವರಾಜ ಮರಾಠಿ ಇದ್ದರು.