ಶಿರಸಿ: ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕೆಳೋರ ಗ್ರಾಮದ ಅರಣ್ಯವಾಸಿಗಳನ್ನು ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕ್ರಮಜರುಗಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ‘ಒಕ್ಕಲೆಬ್ಬಿಸುವ ಪ್ರಕ್ರಿಯೆಯಿಂದ ಅರಣ್ಯವಾಸಿ ನಿರ್ಮಲಾ ಪಾಟೀಲ್ ಆತ್ಮಹತ್ಯೆಮಾಡಿಕೊಂಡಿದ್ದು ದುರದೃಷ್ಟ ಘಟನೆಯಾಗಿದೆ. ಅರಣ್ಯ ಇಲಾಖೆಯ ದೌರ್ಜನ್ಯ ಮಿತಿಮೀರಿದೆ ಎಂಬುದು ಘಟನೆಯಿಂದ ಸಾಬೀತಾಗಿದೆ’ ಎಂದಿದ್ದಾರೆ.
‘ಅರಣ್ಯ ಹಕ್ಕು ಕಾಯ್ದೆ ಮಂಜೂರಿ ಪ್ರಕ್ರಿಯೆ ಜರುಗುತ್ತಿರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಮೇಲೆ ದೌರ್ಜನ್ಯ ವೆಸಗುವುದು ಖಂಡನಾರ್ಹ. ಬಲಪ್ರಯೋಗದ ಮೂಲಕ ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಕ್ರಮ ಸಮಂಜಸವಲ್ಲ. ಇಂತಹ ಬಲಪ್ರಯೋಗ ಪ್ರಕ್ರಿಯೆ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದ್ದಾರೆ.