ಶಿರಸಿ: ಸಂಗೀತ, ಭರತನಾಟ್ಯ ಮುಂತಾದ ಕಲೆಗಳಂತೆ ಯಕ್ಷಗಾನ ಕಲಿಕೆಗೂ ಶಾಸ್ತ್ರೀಯ ವ್ಯವಸ್ಥೆ ಹಾಗೂ ಅದಕ್ಕೆ ಪೂರಕ ಪಠ್ಯ ರೂಪಿಸುವ ಅಗತ್ಯವಿದೆ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಇಲ್ಲಿನ ಟಿ.ಆರ್.ಸಿ. ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಎಂ.ಎ.ಹೆಗಡೆ ದಂಟ್ಕಲ್ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಧಿಕೃತ ಕಲಿಕಾ ವ್ಯವಸ್ಥೆ ಇದ್ದರೆ ಯುವಜನರು ಆಸಕ್ತಿಯಿಂದ ಕಲಿಯಲು ಮುಂದೆ ಬರಬಹುದು. ಯಕ್ಷಗಾನ ಸಾಹಿತ್ಯಕ್ಕೆ ಹೆಚ್ಚು ಒತ್ತು ಸಿಗಬೇಕಾಗಿದೆ’ ಎಂದರು.
‘ವಿದ್ವಾಂಸರ ಸ್ಮರಣೆ ಮುಂದಿನ ತಲೆಮಾರಿಗೆ ಪ್ರೇರಣೆಯಾಗಬೇಕು. ಗೋಷ್ಠಿ, ಬರಹದ ಮೂಲಕ ಎಂ.ಎ.ಹೆಗಡೆ ಯಕ್ಷಗಾನ ಕ್ಷೇತ್ರಕ್ಕೆ ಬಲತಂದಿದ್ದರು’ ಎಂದರು.
ವಿಧ್ವಾಂಸ ಎಂ.ಪ್ರಭಾಕರ ಜೋಶಿ ಮಾತನಾಡಿ, ‘ವಿಧ್ವಾಂಸನಾಗಿದ್ದರೂ ಎಂ.ಎ.ಹೆಗಡೆ ಸರಳತೆ ಮೈಗೂಡಿಸಿಕೊಂಡಿದ್ದ ಮೇರು ವ್ಯಕ್ತಿತ್ವದವರಾಗಿದ್ದರು. ನೇರ ನುಡಿಯ ಮೂಲಕ ತಪ್ಪುಗಳನ್ನು ಖಂಡಿಸುತ್ತಿದ್ದರು. ಯಕ್ಷ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಮಹತ್ವದ್ದು’ ಎಂದರು.
ಕಾರ್ಯಕ್ರಮದಲ್ಲಿ ‘ಯಕ್ಷಗಾನ ಸ್ವರೂಪ ಮತ್ತು ಲಕ್ಷಣ’, ‘ವೈಖರೀ ವಾಚಸ್ಪತಿ’, ‘ದಿ.ಎಂ.ಎ.ಹೆಗಡೆ ಯಕ್ಷಗಾನ ಪ್ರಸಂಗ ಸಮುಚ್ಚಯ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಹಾಸಣಗಿ ಸೇವಾ ಸಹಕಾರ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೊರ್ಸಗದ್ದೆ, ಪತ್ರಕರ್ತ ರಾಜಶೇಖರ ಜೋಗಿನ್ಮನೆ, ಸಾವಿತ್ರಿ ಹೆಗಡೆ, ಸಂಸ್ಮರಣೆ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಕಾರ್ಯದರ್ಶಿ ನಾಗರಾಜ ಜೋಶಿ ಇದ್ದರು. ದಿವಾಕರ ಕೆರೆಹೊಂಡ ನಿರ್ವಹಿಸಿದರು.