ಹುಬ್ಬಳ್ಳಿ: ಉಡಾನ್ ಯೋಜನೆಯಡಿ, ಹುಬ್ಬಳ್ಳಿಯಿಂದ ಬೆಂಗಳೂರು, ಮುಂಬೈ, ಹೈದರಾಬಾದ್ ಹಾಗೂ ಚೆನ್ನೈ ನಗರಗಳಿಗೆ ಸ್ಪೈಸ್ಜೆಟ್ ಸಂಸ್ಥೆಯ ವಿಮಾನಯಾನ ಸೇವೆ ಸೋಮವಾರ ಆರಂಭವಾಯಿತು.
ಬೆಳಿಗ್ಗೆ 9.25ಕ್ಕೆ ಇಲ್ಲಿಂದ ಬೆಂಗಳೂರಿಗೆ ಹೊರಟ ಮೊದಲ ವಿಮಾನಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕಿ ಅಹಿಲ್ಯಾ ಕಾಕೋಡಿಕರ್ ಹಾಗೂ ಸ್ಪೈಸ್ಜೆಟ್ ಸಂಸ್ಥೆಯ ಅಧಿಕಾರಿಗಳು ಚಾಲನೆ ನೀಡಿದರು.
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಸಂಸದ ಪ್ರಹ್ಲಾದ ಜೋಶಿ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಆದರೆ, ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ‘ಹೆಚ್ಚು ವಿಮಾನಗಳು ನಗರದಿಂದ ಕಾರ್ಯ ನಿರ್ವಹಿಸುವುದರಿಂದ ವ್ಯಾಪಾರ–ವಹಿವಾಟು ಹೆಚ್ಚಾಗಲಿದೆ. ಇದರ ಜೊತೆಗೆ ಬೇಲೇಕೇರಿ ಬಂದರು ಅಭಿವೃದ್ಧಿ ಹಾಗೂ ಹುಬ್ಬಳ್ಳಿ– ಬೆಂಗಳೂರು ರೈಲ್ವೆ ಜೋಡಿ ಮಾರ್ಗದ ಕಾಮಗಾರಿಯೂ ನಡೆಯುತ್ತಿರುವುದು ಇನ್ನಷ್ಟು ಅನುಕೂಲವಾಗಲಿದೆ’ ಎಂದರು.