ಶಿರಸಿ: ‘1980ರಲ್ಲಿ ಮೊದಲ ಬಾರಿಗೆ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಆಯ್ಕೆಯಾದರೂ ಬಸವರಾಜ ಹೊರಟ್ಟಿ 1999ರವರೆಗೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಹೈಸ್ಕೂಲ್ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ವೇತನ ಪಡೆದುಕೊಂಡಿದ್ದಾರೆ’ ಎಂದು ರಾಷ್ಟ್ರೀಯ ಸ್ವಾಭಿಮಾನಿ ಶಿಕ್ಷಕರ ಸಂಘದ ಸಹ ಸಂಚಾಲಕ ಎಂ.ಭರತ್ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮಾಹಿತಿ ಹಕ್ಕಿನಡಿ ಪಡೆದ ದಾಖಲೆಯಲ್ಲಿ ವಿಧಾನ ಪರಿಷತ್ ಸದಸ್ಯರ ವೇತನ, ಭತ್ಯೆ ಪಡೆಯುವುದರ ಜತೆಗೆ ಶಿಕ್ಷಕ ವೇತನ ಪಡೆದಿರುವುದು ದೃಢಪಟ್ಟಿದೆ’ ಎಂದು ಆರೋಪಿಸಿದರು.
‘ಬಸವರಾಜ ಪಥ ಹೆಸರಿನಲ್ಲಿ ಚುನಾವಣೆ ಪ್ರಚಾರಕ್ಕೆ ಹೊರತಂದ ಪುಸ್ತಕ ಪುಸ್ತಕದ ಮುಖಪುಟದಲ್ಲಿ ಹೊರಟ್ಟಿ ಸಭಾಪತಿ ಸ್ಥಾನದಲ್ಲಿ ಕುಳಿತ ಚಿತ್ರ, ಸರ್ಕಾರದ ಲಾಂಛನ ಮುದ್ರಿಸಲಾಗಿದೆ. ಶಿಕ್ಷಕರ ಮೇಲೆ ಪ್ರಭಾವ ಬೀರಲು ಇಂತಹ ಕೃತ್ಯ ಎಸಗಿರುವ ಹೊರಟ್ಟಿ ವಿರುದ್ಧ ಸರ್ಕಾರಿ ಲಾಂಛನ ದುರ್ಬಳಕೆ ಮಾಡಿಕೊಂಡ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.