ಕೂಲಿ ಕೇಳಿದವನಿಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ

ಗೋಕರ್ಣ: ಮನೆಗೆ ಪೇಂಟಿಂಗ್ ಕೆಲಸ ಮಾಡಿದ ವ್ಯಕ್ತಿಯು, ‘ಕೆಲಸ ಸರಿ ಮಾಡದೇ ಹಣ ಕೇಳಿದ’ ಎಂದು ಆಪಾದಿಸಿ ಮನೆ ಮಾಲೀಕ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದೆ.
ಸಚಿನ್ ಶ್ಯಾಮಸುಂದರ ನಾಡ್ಕರ್ಣಿ ಎಂಬುವವರು ಆರೋಪಿಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಬೇಲೆಹಿತ್ತಲ ನಿವಾಸಿ ರಾಮ ನಾಗಪ್ಪ ಗೌಡ ಹಲ್ಲೆಗೆ ಒಳಗಾದವರು. ಅವರು ಸಚಿನ್ ನಾಡ್ಕರ್ಣಿ ಅವರ ಮನೆಯಲ್ಲಿ ಮಂಗಳವಾರ ಬೆಳಿಗ್ಗೆ ಪೇಂಟಿಂಗ್ ಕೆಲಸ ಮಾಡಿದ್ದರು. ಸಂಜೆ 7 ಗಂಟೆ ಸುಮಾರಿಗೆ ಕೆಲಸ ಮಾಡಿದ್ದಕ್ಕೆ ಕೂಲಿ ಕೇಳಲು ಹೋದಾಗ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ.
ಕೆಲಸ ಸರಿಯಾಗಿ ಮಾಡದೇ ಹಣ ಕೇಳಲು ಬಂದ ಎಂದು ಸಿಟ್ಟಿಗೆದ್ದ ಆರೋಪಿ ಅವಾಚ್ಯ ಶಬ್ದದಿಂದ ನಿಂದಿಸಿದರು. ಕಬ್ಬಿಣದ ರಾಡಿನಿಂದ ತಲೆಗೆ, ಕೈಗೆ, ಕಿವಿಯ ಮೆಲೆ, ಕೆನ್ನೆಯ ಮೇಲೆ ಮತ್ತು ಕಾಲಿಗೆ ಹೊಡೆದಿದ್ದಾರೆ ಎಂದು ಆಪಾದಿಸಲಾಗಿದೆ. ತೀವ್ರ ಗಾಯಗೊಂಡ ರಾಮ ಗೌಡ ಅವರಿಗೆ ಗೋಕರ್ಣದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ಆ.31ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.