ಭಟ್ಕಳ: ‘ಮೊಗೇರ ಸಮುದಾಯದರ ಪ್ರತಿಭಟನೆಯ ಕೂಗು ಸರ್ಕಾರಕ್ಕೆ ಮುಟ್ಟಿದೆ. ಸರ್ಕಾರ ಕೂಡ ಈ ಬಗ್ಗೆ ಶೀಘ್ರ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡುವ ಪ್ರಯತ್ನದಲ್ಲಿದೆ’ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಪರಿಶಿಷ್ಟ ಜಾತಿ ಸೌಲಭ್ಯಕ್ಕಾಗಿ ಪಟ್ಟಣದಲ್ಲಿ ಮೊಗೇರ ಸಮುದಾಯವರು ನಡೆಸುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ಮಂಗಳವಾರ ಅವರು ಭೇಟಿ ನೀಡಿ ಮಾತನಾಡಿದರು.
‘ಮೊಗೇರ ಸಮುದಾಯ ಎಸ್.ಸಿ ಸೌಲಭ್ಯ ವಂಚಿತರಾದ ಬಗ್ಗೆ ಹಾಗೂ ವಿವಿಧ ಸ್ಥರಗಳ ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದ ಬಗ್ಗೆ ನಮಗೆ ಅರಿವಿದೆ. ಈ ಬಗ್ಗೆ ಮುಖ್ತಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಜೊತೆ ಮಾತನಾಡಿದ್ದೇನೆ’ ಎಂದರು.
‘ಏ.23ರಂದು ಕಾನೂನು ತಜ್ಞರನ್ನೊಳಗೊಂಡ ಒಂದು ಸಮಿತಿಯು ಸಭೆ ನಡೆಸಲಿದೆ. ಮೊಗೇರರಿಗೆ ಎಸ್.ಸಿ ಸೌಲಭ್ಯ ನೀಡುವ ಸಾಧ್ಯತೆ ಬಗ್ಗೆ ಚರ್ಚಿಸಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗುವುದು. ನಂತರ ಮುಖ್ಯಮಂತ್ರಿ ಜೊತೆ ಅಂತಿಮ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರಲಾಗುವುದು’ ಎಂದು ಭರವಸೆ ನೀಡಿದರು.
‘ಈ ಮಧ್ಯೆ ಏನಾದರೂ ಹೆಚ್ಚುವರಿ ಮಾಹಿತಿ ಬೇಕಾದರೆ ನಿಮ್ಮಿಂದ ಪಡೆದುಕೊಳ್ಳಲಾಗುವುದು. ಅಲ್ಲಿಯ ತನಕ ಪ್ರತಿಭಟನೆಯನ್ನು ಕೈಬಿಡಿ’ ಎಂದು ಮನವಿ ಮಾಡಿದರು.
ಮೊಗೇರ ಸಮುದಾಯದ ಪರವಾಗಿ ನಾಗರಾಜ ಇ.ಎಚ್, ಎಫ್.ಕೆ.ಮೊಗೇರ ಮಾತನಾಡಿದರು. ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ, ತಹಶೀಲ್ದಾರ್ ಬಿ.ಸುಮಂತ್, ಡಿ.ವೈ.ಎಸ್ಪಿ ಕೆ.ಯು.ಬೆಳ್ಳಿಯಪ್ಪ ಇದ್ದರು.