ಹಳಿಯಾಳ, ಯಲ್ಲಾಪುರ, ಮುಂಡಗೋಡ ಹಾಗೂ ಶಿರಸಿ ತಾಲ್ಲೂಕಿನ ಬನವಾಸಿ ಭಾಗಗಳಲ್ಲಿ, ಪ್ರತಿ ವರ್ಷ ಕಾಡಾನೆಗಳು 3–4 ತಿಂಗಳು ಕಾಲ ಸಂಚಾರ ನಡೆಸುವುದು ವಾಡಿಕೆ. ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿ, ರೈತರಿಗೆ ಆರ್ಥಿಕವಾಗಿ ನಷ್ಟ ಉಂಟು ಮಾಡುತ್ತವೆ. ಈ ರೀತಿ ವನ್ಯಜೀವಿ ಹಾಗೂ ಮನುಷ್ಯ ಸಂಘರ್ಷಕ್ಕೆ ಒಳಗಾಗದಂತೆ, ಪೂರಕವಾಗಿ ಜೀವನ ನಡೆಸಲು ಅರಣ್ಯ ಇಲಾಖೆ ವಿನೂತನ ಯೋಜನೆ ಜಾರಿಗೊಳಿಸಿದೆ. ಯೋಜನೆಯಡಿ ರೈತರಿಗೆ ಅಗತ್ಯ ಪರಿಕರಗಳನ್ನು ನೀಡಿ, ಆನೆಗಳಿಂದ ಸುಲಭವಾಗಿ ಬೆಳೆ ರಕ್ಷಣೆ ಮಾಡಿಕೊಳ್ಳುವ ಪ್ರಯೋಗಕ್ಕೆ ಚಾಲನೆ ನೀಡಿದೆ.