ಶಿರಸಿ: ತಾಲ್ಲೂಕಿನ ಸೋಂದಾದ ಜೈನಮಠದ ವತಿಯಿಂದ ಇಲ್ಲಿನ ರಾಯರಪೇಟೆಯಲ್ಲಿ ಪುನರುಜ್ಜೀವಗೊಂಡ ಜೈನ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವಕ್ಕೆ ಬುಧವಾರ ಚಾಲನೆ ದೊರೆಯಿತು.
ನಗರದ ಎಸ್ಬಿಐ ವೃತ್ತದಿಂದ ಪಾರ್ಶ್ವನಾಥರ ಮೂರ್ತಿಯನ್ನು ಬಸದಿಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಮಂಗಲಸ್ನಾನದ ಬಳಿಕ ವಾದ್ಯಘೋಷ, ಪೂರ್ಣಕುಂಭಗಳೊಂದಿಗೆ ಮೂರ್ತಿಯನ್ನು ಅಶ್ವಾರೂಢ ರಥದಲ್ಲಿ ಕೊಂಡೊಯ್ಯಲಾಯಿತು. ಜತೆಯಲ್ಲಿ ಆನೆಯ ಮೇಲೆ ಕುಳಿತಿದ್ದ ಇಂದ್ರ ಇಂದ್ರಾಣಿಯರು ಸಾಗಿದರು.
ಬಸದಿಯಲ್ಲಿ ಪಂಚಾಮೃತ ಅಭಿಷೇಕ, ನವಗ್ರಹ ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಧರ್ಮಸಭೆ ನಡೆಯಿತು. ರಾತ್ರಿ ನಡೆದ ಇಂದ್ರಸಭೆಯಲ್ಲಿ ಗರ್ಭಾವತರಣ ಕಲ್ಯಾಣದ ಮೂಲಕ 16 ಸ್ವಪ್ನಗಳ ದರ್ಶನ ಮಾಡಿಸಲಾಯಿತು.
ಸೋಂದಾ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಪುಣ್ಯ ಸಾಗರ ಮಹಾರಾಜರು, ಕಂಬದಳ್ಳಿ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಪಾಲ್ಗೊಂಡಿದ್ದರು.