ಶಿರಸಿ: ಪಕ್ಷದ ಚಿಹ್ನೆ ಅಡಿ ಅಲ್ಲದಿದ್ದರೂ ಪಕ್ಷದ ಕಾರ್ಯಕರ್ತರು ಸ್ಪರ್ಧಿಸುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕೆಲಸ ಮಾಡುವ ಹೊಣೆ ನಾಯಕರ ಮೇಲಿದೆ ಎಂದು ಕಾರ್ಮಿಕ ಕಲ್ಯಾಣ, ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ನಾವು ಚುನಾವಣೆಗೆ ನಿಂತಾಗ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಈಗ ಅವರು ಚುನಾವಣೆಗೆ ಸ್ಪರ್ಧಿಸುವ ಸಮಯ ಬಂದಿದೆ. ಹೀಗಾಗಿ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇವೆ' ಎಂದರು.
'ಬಿಜೆಪಿಯಲ್ಲಿ ಭಿನ್ನಮತ ಇದೆ ಎಂಬುದು ಮಾಧ್ಯಮಗಳ ಸೃಷ್ಟಿ. ನಮ್ಮದು ರಾಷ್ಟ್ರೀಯ ಪಕ್ಷ. ಬಿಜೆಪಿ ಎಂಬುದೇ ನಮ್ಮ ಬಣ ಹೊರತು, ನಮ್ಮೊಳಗೆ ಪ್ರತ್ಯೇಕ ಬಣಗಳಿಲ್ಲ' ಎಂದರು.
'ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಪ್ರಸ್ತಾಪವಿಲ್ಲ. ಅದೆಲ್ಲ ಕೇವಲ ಊಹಾಪೋಹ' ಎಂದು ಹೇಳಿದರು.