ಹಳಿಯಾಳ: ಹುಲಿ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ತಲೆ ಸಹಿತ ಹುಲಿ ಚರ್ಮವನ್ನು ಜಪ್ತಿ ಮಾಡಿದ್ದಾರೆ.
ಆರೋಪಿಯನ್ನು ಪಟ್ಟಣದ ಮಹಾದೇವ ನಾರಾಯಣ ತೇರಗಾಂವಕರ ಎಂದು ಗುರುತಿಸಲಾಗಿದೆ. ಪಟ್ಟಣದ ನಾಗಜರಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಹುಲಿ ಚರ್ಮವನ್ನು ಸಾಗಿಸುವಾಗ ಪೊಲೀಸರು ಆರೋಪಿಯನ್ನು ಬಂಧಿಸಿದರು. ಇಲಾಖೆಯ ಅರಣ್ಯ ಸಂಚಾರಿ ದಳದ ಚಿಕ್ಕಮಗಳೂರು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆರೋಪಿಯಿಂದ ದ್ವಿಚಕ್ರ ವಾಹನವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಆರ್.ಶೋಭಾ, ಸಿಬ್ಬಂದಿ ಎಚ್.ದೇವರಾಜ್, ಸಿ.ಎಚ್.ಕೃಷ್ಣರಾಜ ಅರಸ್, ಡಿ.ಎಚ್.ದಿನೇಶ್, ಹೇಮಾವತಿ, ತಿಮ್ಮಶೆಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ವಲಯ ಅರಣ್ಯಾಧಿಕಾರಿ ಮಹೇಶ ಹಿರೇಮಠ ತಿಳಿಸಿದ್ದಾರೆ.