ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಮ್ಸ್’ ನಿರ್ದೇಶಕರ ಪರ– ವಿರೋಧ ಹೋರಾಟ

ಕಾರವಾರ ವೈದ್ಯಕೀಯ ಕಾಲೇಜಿನ ಡಾ.ಶಿವಾನಂದ ದೊಡ್ಮನಿ ವರ್ಗಾವಣೆಗೆ ಜನಶಕ್ತಿ ವೇದಿಕೆ ಪಟ್ಟು
Last Updated 28 ಜೂನ್ 2019, 12:13 IST
ಅಕ್ಷರ ಗಾತ್ರ

ಕಾರವಾರ:‘ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ.ಶಿವಾನಂದ ದೊಡ್ಮನಿ ಅನೇಕ ಭ್ರಷ್ಟಾಚಾರಗಳಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿ ಜನಶಕ್ತಿ ವೇದಿಕೆಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು.

ತಳ್ಳುಗಾಡಿಗೆ ಆಂಬುಲೆನ್ಸ್ ಎಂದು ಫಲಕ ಹಚ್ಚಿ, ಸೈರನ್ ಅಳವಡಿಸಲಾಗಿತ್ತು. ಅದರ ಮೇಲೆ ರೋಗಿಯ ವೇಷಧಾರಿ ಮಲಗಿದ್ದರು. ಜಿಲ್ಲಾ ಆಸ್ಪತ್ರೆ ಆವರಣದಿಂದ ಆ ತಳ್ಳುಗಾಡಿಯ ಜೊತೆ ಮೆರವಣಿಗೆ ಹೊರಟ ಪ್ರತಿಭಟನಾಕಾರರು ನಗರದ ಪಿಕಳೆ ರಸ್ತೆ, ಸವಿತಾ ವೃತ್ತ, ಗ್ರೀನ್ ಸ್ಟ್ರೀಟ್ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ನಂತರ ಉಪವಿಭಾಗಾಧಿಕಾರಿ ಅಭಿಜಿನ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ‘ಡಾ.ಶಿವಾನಂದ ದೊಡ್ಮನಿ ಅವರು ಹಿಂದಿನಿಂದಲೂ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನಿಯಮದ ಪ್ರಕಾರ ಯಾವುದೇ ವೈದ್ಯಕೀಯ ಕಾಲೇಜಿನಲ್ಲಿ ಒಬ್ಬರೇ ನಿರ್ದೇಶಕರು ನಾಲ್ಕಕ್ಕಿಂತ ಹೆಚ್ಚು ವರ್ಷ ಅಧಿಕಾರದಲ್ಲಿ ಇರಬಾರದು. ಆದರೆ, ಐದು ವರ್ಷಗಳಿಂದ ಅಧಿಕಾರದಲ್ಲಿರುವ ದೊಡ್ಮನಿ ಅವರಿಗೆ ನಿಯಮವನ್ನು ಗಾಳಿಗೆ ತೂರಲಾಗಿದೆ. ಈ ಮೂಲಕ ಅವರ ಭ್ರಷ್ಟಾಚಾರಕ್ಕೆ ಸರ್ಕಾರವೇ ಜೊತೆಯಾಗಿದೆ’ ಎಂದು ದೂರಿದರು.

‘2018ರ ಆಗಸ್ಟ್‌ನಲ್ಲಿ ಅವರ ಸೇವಾವಧಿ ಮುಗಿದಿದೆ. ಕಾಲೇಜಿನ ನಿರ್ದೇಶಕರ ಹುದ್ದೆಗೆ ಅರ್ಜಿ ಹಾಕಲು ಪತ್ರಿಕೆಗಳಲ್ಲಿ ಮೂರು ಬಾರಿ ಜಾಹೀರಾತು ನೀಡಲಾಗಿತ್ತು. ಆದರೆ, ಈವರೆಗೂ ಅಭ್ಯರ್ಥಿಗಳ ಸಂದರ್ಶನ ಮಾಡದೇ ಭ್ರಷ್ಟರನ್ನೇ ಮುಂದುವರಿಸಿಕೊಂಡು ಹೋಗಲು ಅವಕಾಶ ಕೊಡಲಾಗಿದೆ. ಈ ವಿಚಾರವನ್ನುವೈದ್ಯಕೀಯ ಶಿಕ್ಷಣ ಸಚಿವ ತುಕಾರಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೂ ತಿಳಿಸಲಾಗಿದೆ. ಆದರೂ ದೊಡ್ಮನಿ ಅವರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಮ ನಾಯ್ಕ, ಅನು ಕಳಸ, ಸಂಗೀತಾ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT