ಶಿರಸಿ: ಪ್ರತ್ಯೇಕ ಶಿರಸಿ ಜಿಲ್ಲೆ ರಚನೆಗೆ ಆಗ್ರಹಿಸಿ 'ಶಿರಸಿ ಜಿಲ್ಲಾ ಹೋರಾಟ ಸಮಿತಿ' ವತಿಯಿಂದ ನಗರದ ಬಿಡ್ಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆ ಎದುರು ತಮಟೆ ಬಾರಿಸಿ ಪ್ರತಿಭಟನೆ ಶುಕ್ರವಾರ ನಡೆಯಿತು.
ಹಿರಿಯ ನಾಗರಿಕರಾದ ಮೋಹನ ಶಿರೂರು ಚೆಂಡೆ ಬಾರಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಬಿಡ್ಕಿಬೈಲಿನ ಸುತ್ತ ತಮಟೆ ಬಾರಿಸುತ್ತ ಮೆರವಣಿಗೆ ನಡೆಸಲಾಯಿತು.
ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ಪ್ರತ್ಯೇಕ ಜಿಲ್ಲೆ ರಚನೆಗೆ ಒತ್ತಾಯಿಸಿ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಬಾರಿ ಹೋರಾಟವನ್ನು ಬಲಗೊಳಿಸಲಿದ್ದೇವೆ. ನ.೧ರಂದು ಸರ್ಕಾರ ಶಿರಸಿ ಜಿಲ್ಲೆ ಘೋಷಿಸುವ ಭರವಸೆ ನೀಡದಿದ್ದರೆ ಅಂದು ಕರಾಳ ದಿನ ಆಚರಿಸಲಾಗುವುದು ಎಂದರು.
ಶಿರಸಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ಘಟ್ಟದ ಮೇಲಿನ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚಿಸಲಿ. ದೂರದ ಜಿಲ್ಲಾ ಕೇಂದ್ರಕ್ಕೆ ಶಿರಸಿ, ಸಿದ್ದಾಪುರ ತಾಲ್ಲೂಕುಗಳ ಜನರು ಅಲೆದಾಡುವ ಸಮಸ್ಯೆ ತಪ್ಪಿಸಿ ಎಂದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಎಂ.ಎನ್.ಭಟ್ಟ, ವಿಘ್ನೇಶ್ವರ, ಶೋಭಾ ನಾಯ್ಕ ಇದ್ದರು.