ಕಾರವಾರ: ಉತ್ತರಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಗುರುವಾರ ಬೆಳಗಿನ ಜಾವ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದೆ. ಅಕಾಲಿಕವಾಗಿ ಮಳೆಯಾಗುತ್ತಿರುವುದು ಕೃಷಿಕರು ಮತ್ತು ರೈತರ ಆತಂಕಕ್ಕೆ ಕಾರಣವಾಗಿದೆ.
ಕರಾವಳಿಯ ಹೊನ್ನಾವರ ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವು ನಿಮಿಷಗಳ ಕಾಲ ಜೋರಾಗಿ ವರ್ಷಧಾರೆಯಾಯಿತು. ಅಂತೆಯೇ ಕುಮಟಾ ಮತ್ತು ಅಂಕೋಲಾದಲ್ಲಿ ರಾತ್ರಿ ಮೂರು ಗಂಟೆಗೆ ಸಾಧಾರಣ ಪ್ರಮಾಣದಲ್ಲಿ ಮಳೆ ಬಂತು. ಶಿರಸಿಯಲ್ಲೂ ತುಂತುರು ಹನಿ ಬಿದ್ದಿದೆ. ಉಳಿದಂತೆ, ಜಿಲ್ಲೆಯ ವಿವಿಧೆಡೆ ಚದುರಿದಂತೆ ಮೋಡ ಕವಿದ ವಾತಾವರಣವಿದೆ.
ಅಕಾಲಿಕ ಮಳೆಯಿಂದ ಅಡಿಕೆ ಬೆಳೆಗಾರರು, ಮೆಕ್ಕೆಜೋಳ, ಭತ್ತ ಕೃಷಿಕರು ಚಿಂತಿತರಾಗಿದ್ದಾರೆ. ಫಸಲು ಮನೆಯಂಗಳದಲ್ಲಿ, ಜಮೀನಿನಲ್ಲಿ ಒಣಗುತ್ತಿದ್ದು, ಮಳೆ ನೀರಿನಲ್ಲಿ ತೋಯ್ದರೆ ಸಂಪೂರ್ಣ ಹಾಳಾಗುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಇನ್ನೆರಡು ದಿನ ಮೋಡ ಕವಿದ ವಾತಾವರಣ ಇರಲಿದ್ದು, ಮತ್ತಷ್ಟು ಮಳೆಯ ಸಾಧ್ಯತೆ ಕಡಿಮೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.