ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಗರ ಕವಚ’ ಅಣಕು ಕಾರ್ಯಾಚರಣೆ

ಪೊಲೀಸ್, ಕರಾವಳಿ ಕಾವಲು ಪೊಲೀಸ್, ಭಾರತೀಯ ತಟ ರಕ್ಷಣಾ ದಳ, ನೌಕಾಪಡೆ ಭಾಗಿ
Last Updated 7 ಅಕ್ಟೋಬರ್ 2020, 12:42 IST
ಅಕ್ಷರ ಗಾತ್ರ

ಕಾರವಾರ: ಸಮಾಜಘಾತುಕ ವ್ಯಕ್ತಿಗಳು, ಭಯೋತ್ಪಾದಕರ ದಾಳಿ, ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಲು ನಗರದ ವಿವಿಧೆಡೆ ಬುಧವಾರ ‘ಸಾಗರ ಕವಚ’ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು. ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು.

ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ಭಾರತೀಯ ತಟ ರಕ್ಷಣಾ ದಳ ಹಾಗೂ ನೌಕಾಪಡೆ ಸಂಯುಕ್ತವಾಗಿ ಈ ಕಾರ್ಯಾಚರಣೆ ಹಮ್ಮಿಕೊಂಡಿವೆ. ಈ ಅವಧಿಯಲ್ಲಿ ಇಲಾಖೆಗಳ ಸಿದ್ಧತೆಯ ಬಗ್ಗೆ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲಾಗುತ್ತದೆ.

ತುರ್ತು ಸಂದರ್ಭಗಳಲ್ಲಿ ತಕ್ಷಣಕ್ಕೆ ಸ್ಪಂದಿಸುವ ಸಾಮರ್ಥ್ಯ ಹೆಚ್ಚಿಸುವುದು, ನಾಗರಿಕರು ಹಾಗೂ ವಿವಿಧ ರಕ್ಷಣಾ ಇಲಾಖೆಗಳ ನಡುವೆ ಉತ್ತಮ ಸಂಬಂಧ ಮೂಡಿಸುವುದು, ಅಗತ್ಯ ಇರುವಲ್ಲಿ ಶಕ್ತಿಯನ್ನು ಮತ್ತಷ್ಟು ವೃದ್ಧಿಸುವುದು ಈ ಕಾರ್ಯಾಚರಣೆಯ ಉದ್ದೇಶ.

ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಕಾಳಿ ನದಿ ಸೇತುವೆಯ ಬಳಿ, ಬೈತಖೋಲ್ ಬಂದರಿಗೆ ಹೋಗುವ ದಾರಿಯಲ್ಲಿ, ರೈಲು ನಿಲ್ದಾಣ, ಕಡಲತೀರಗಳು, ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ಹಾಗೂ ನಗರದ ವಿವಿಧ ಕಡೆಗಳಲ್ಲಿ ತಪಾಸಣೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳನ್ನು ಪರಿಶೀಲನೆ ಮಾಡಿದರು.

ಬೈತಖೋಲ್ ಬಂದರಿನ ಸುತ್ತಮುತ್ತ ಕೋಸ್ಟ್‌ ಗಾರ್ಡ್ ಸಿಬ್ಬಂದಿ ಮೀನುಗಾರಿಕೆ ದೋಣಿಗಳನ್ನು ಪರಿಶೀಲಿಸಿದರು. ಅದರ ಪರವಾನಗಿ ಸೇರಿದಂತೆ ವಿವಿಧ ದಾಖಲೆಗಳನ್ನು ತಪಾಸಣೆ ಮಾಡಿದರು.

ಈ ಕಾರ್ಯಾಚರಣೆಯು ಗುರುವಾರವೂ ಮುಂದುವರಿಯಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT