ಕಾರವಾರ: ‘ನಗರದ ಕಾರವಾರ– ಕೈಗಾ ರಸ್ತೆಯು ಹೊಂಡಗಳಿಂದ ಕೂಡಿದೆ. ಅದನ್ನು ದುರಸ್ತಿ ಮಾಡದಿದ್ದರೆ ಸ್ವಂತ ಖರ್ಚಿನಿಂದ ದುರಸ್ತಿಗೆ ಮುಂದಾಗುತ್ತೇನೆ’ ಎಂದು ಶೇಜವಾಡದ ಹಿರಿಯ ನಾಗರಿಕ ಜಾನ್ ಎಸ್.ಬೆರೆಟೋ (80) ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದಾರೆ. ‘ರಸ್ತೆಯನ್ನು ದುರಸ್ತಿ ಮಾಡುವಂತೆ ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಈ ಹಿಂದೆ ಹಲವು ಬಾರಿ ಹೊಂಡಗಳನ್ನು ಸ್ವಂತ ಹಣ ಖರ್ಚು ಮಾಡಿ ಮುಚ್ಚಿದ್ದೆ. ರಸ್ತೆ ಕಾಮಗಾರಿಯು ಕಳಪೆಯಾಗಿದ್ದು, ಅಪಘಾತಗಳಾಗಿ ಅನೇಕರು ಆಸ್ಪತ್ರೆ ಸೇರುತ್ತಿದ್ದಾರೆ. ಹಾಗಾಗಿ ಮತ್ತಷ್ಟು ಜನ ತೊಂದರೆಗೆ ಸಿಲುಕುವ ಮೊದಲು ರಸ್ತೆ ದುರಸ್ತಿ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.