ಕಾರವಾರ: ಡಿ.22ರಂದು ನಗರದಿಂದ ಆರಂಭವಾಗಬೇಕಿದ್ದ 'ಖಗ್ರಾಸದಿಂದ ಕಂಕಣದವರೆಗೆ' ಅಭಿಯಾನವನ್ನು ರದ್ದು ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಮಂಗಳೂರಿನಲ್ಲಿ ಕರ್ಫ್ಯೂ ಮುಂದುವರಿದಿದೆ. ಹಾಗಾಗಿ ಅಭಿಯಾನವನ್ನು ರದ್ದು ಮಾಡಲಾಗಿದೆ ಎಂದು ಹವ್ಯಾಸಿ ಖಗೋಳ ತಜ್ಞ ಮಂಜುನಾಥ ಜೇಡಿಕುಣಿ ಹೇಳಿದ್ದಾರೆ.
ಡಿ.26ರಂದು ಸಂಭವಿಸಲಿರುವ ಕಂಕಣ ಸೂರ್ಯಗ್ರಹಣದ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಲು ಕಾರವಾರದಿಂದ ಮಂಗಳೂರಿನವರೆಗೆ ಅಭಿಯಾನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು. ಕಂಕಣ ಸೂರ್ಯಗ್ರಹಣವು ರಾಜ್ಯದಲ್ಲಿ 39 ವರ್ಷಗಳ ಬಳಿಕ ಇದೇ ಮೊದಲ ಸಲ ಗೋಚರಿಸುತ್ತಿದ್ದು, ಕರಾವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರಲಿದೆ.
ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಲು ಸೂಕ್ತವಾದ ಸ್ಥಳ ಮತ್ತು ವಿಧಾನದ ಬಗ್ಗೆ ಮಾಹಿತಿಗೆ ಆಸಕ್ತರು ಮೊಬೈಲ್: 96862 62664 ಹಾಗೂ 99020 43452 ಸಂಪರ್ಕಿಸಬಹುದು.