ಬೆಂಗಳೂರು: ‘ನೀವು ಭಿಕ್ಷುಕರಲ್ಲ. ಪಕ್ಷದ ಕಾರ್ಯಕರ್ತರು. ನಿಮ್ಮ ಬೇಡಿಕೆ ಏನಿದ್ದರೂ ಕಚೇರಿಗೆ ಬಂದು ಇಂಥದ್ದು ಬೇಕು ಎಂದು ಅಧಿಕಾರಯುತವಾಗಿ ಕೇಳಿ. ಇಲ್ಲಿ ಬಂದು ಮರ್ಯಾದೆ ಕಳೆದುಕೊಳ್ತೀರಾ?’...
ಇದು ಶಾಸಕ ಡಿ.ಕೆ.ಶಿವಕುಮಾರ್ ಅವರು ನಿಗಮ ಮಂಡಳಿಗಳಿಗೆ ನೇಮಕಾತಿ ಕೋರಿ ಬಂದ ಮಹಿಳಾ ಕಾರ್ಯಕರ್ತರಿಗೆ ಹೇಳಿದ ಮಾತು.
ನಗರದ ಅಶೋಕ ಹೋಟೆಲ್ನಲ್ಲಿ ಕಾಂಗ್ರೆಸ್– ಜೆಡಿಎಸ್ ಮುಖಂಡರ ಜಂಟಿ ಸುದ್ದಿಗೋಷ್ಠಿ ಮುಗಿಸಿ ಹೊರಬರುತ್ತಿದ್ದ ವೇಳೆ ಹೋಟೆಲ್ ಮುಂಭಾಗದಲ್ಲಿ ಕೆಲವು ನಾಯಕಿಯರು ನಿಂತಿದ್ದರು. ಹಿರಿಯ ನಾಯಕರನ್ನು ಖುದ್ದಾಗಿ ಭೇಟಿಯಾಗಿ ಅಹವಾಲು ಹೇಳಿಕೊಳ್ಳುವುದು ಅವರ ಆಸೆಯಾಗಿತ್ತು.
ಹೋಟೆಲ್ ಮುಂಭಾಗ, ಮಾಧ್ಯಮಗಳ ಸಮ್ಮುಖದಲ್ಲಿ ಅವರು ನಿಂತಿದ್ದಾಗ ಮುಜುಗರಕ್ಕೊಳಗಾದಂತೆ ಕಂಡ ಶಿವಕುಮಾರ್, ‘ಇಲ್ಲೆಲ್ಲ ಬಂದು ನಿಲ್ಲುವುದು ಸರಿಯಲ್ಲ. ನಿಮ್ಮ ಪ್ರಯತ್ನ ನಿರುಪಯುಕ್ತವಾಗುತ್ತದೆ. ಇಂಥಹ ಕೆಲಸ ಮಾಡಬೇಡಿ. ಇಲ್ಲಿಂದ ಹೊರಡಿ’ ಎಂದು ತಾಕೀತು ಮಾಡಿದರು.