ಬೆಂಗಳೂರು: ಗಿರಿನಗರದ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಮತ್ತು ಖಾತೆ ನೋಂದಣಿ ಕೋರಿದ ಹೊಸನಗರ ರಾಮಚಂದ್ರಾಪುರ ಮಠದ ಅರ್ಜಿ ವಜಾಗೊಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಆಯುಕ್ತರ ಆದೇಶ ಪ್ರಶ್ನಿಸಿ ಮಠದ ಸಿಇಒ ಕೆ.ಜಿ.ಭಟ್ ಮತ್ತು ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಆಯುಕ್ತರ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ‘ಭೂಮಿಯ ಒಡೆತನದ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಬಿಬಿಎಂಪಿ ಆಯುಕ್ತರಿಗೆ ಇಲ್ಲ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು.
‘ಐಎಎಸ್ ಅಧಿಕಾರಿಯಾದ ಮಾತ್ರಕ್ಕೆ ಸಿವಿಲ್ ಕೋರ್ಟ್ನ ಅಧಿಕಾರ ಚಲಾಯಿಸಬಹುದೇ, ಭೂಮಿ ಒಡೆತನ ವಿಚಾರ ತೀರ್ಮಾನಿಸುವ ಅಧಿಕಾರವನ್ನು ಆಯುಕ್ತರಿಗೆ ಕೊಟ್ಟವರು ಯಾರು’ ಎಂದು ಕಿಡಿಕಾರಿದರು.
ಪ್ರತಿವಾದಿಗಳಾದ ಬಿಬಿಎಂಪಿ ಆಯುಕ್ತರು, ನಗರ ಯೋಜನಾ ದಕ್ಷಿಣ ವಿಭಾಗದ ಸಹಾಯಕ ನಿರ್ದೇಶಕ, ಮಠದ ವಿರುದ್ಧದ ದೂರುದಾರ ಎಂ.ಪವನ ಪ್ರಸಾದ್ ಮತ್ತು ನ್ಯಾಯಾಂಗ ಹೊಣೆಗಾರಿಕಾ ಸಮಿತಿ ಅಧ್ಯಕ್ಷರಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಪೀಠ, ಈ ಸಂಬಂಧ ಆಕ್ಷೇಪ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.
ಮಠದ ಪರ ಪಿ.ಮನಮೋಹನ್ ವಕಾಲತ್ತು ವಹಿಸಿದ್ದು, ಗಣಪತಿ ಹೆಗ್ಡೆ ವಾದ ಮಂಡಿಸಿದರು.