ಶಿರಸಿ: ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳು ಮತಬ್ಯಾಂಕ್ ದೃಷ್ಟಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿವೆ. ರೈತರ ಕಾಳಜಿ ಇಲ್ಲದ ಈ ಪಕ್ಷಗಳನ್ನು ಅಧಿಕಾರದಿಂದ ದೂರ ಇಡಲು ಪರ್ಯಾಯ ಶಕ್ತಿಗೆ ಬೆಂಬಲಿಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಮೇ 11ಕ್ಕೆ ರೈತ ಸಂಘದ ಕೋರ್ ಕಮಿಟಿ ಸಭೆ ನಡೆಯಲಿದೆ. ರೈತ ಸಂಘದ ಸಿದ್ಧಾಂತಗಳಿಗೆ ಒಪ್ಪಿದರೆ ಆಮ್ ಆದ್ಮಿ ಪಕ್ಷಕ್ಕೆ (ಆಪ್) ಬೆಂಬಲಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.
‘ರಾಜ್ಯದಲ್ಲಿ ಶೇ65ರಷ್ಟು ರೈತರಿದ್ದಾರೆ. ಅವರು ಸಂಕಷ್ಟದಲ್ಲಿದ್ದಾರೆ. ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಹಿಂದುತ್ವದ ಅಸ್ತ್ರ ಬಳಕೆಯಾಗುತ್ತಿದೆ’ ಎಂದು ಆರೋಪಿಸಿದರು.
‘ಏ.29 ರಂದು ಬಸವನಗುಡಿಯಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದೆ. ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ಅಲ್ಲಿ ಒತ್ತಾಯಿಸಲಾಗುವುದು. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ರೈತರ ಶಾಪಕ್ಕೆ ಗುರಿಯಾಗಲಿದೆ’ ಎಂದು ಎಚ್ಚರಿಸಿದರು.