ತಾಲ್ಲೂಕಿನ ಬಿಣಗಾ, ಅರಗಾ ಮುಂತಾದೆಡೆ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು ಕೊರೆಯಲಾಗಿದೆ. ಅವುಗಳಲ್ಲಿದ್ದ ಬೃಹತ್ ಬಂಡೆಗಲ್ಲುಗಳನ್ನು ಒಡೆದು ಬೇರೆಡೆಗೆ ಲಾರಿಗಳ ಮೂಲಕ ಸಾಗಿಸಲಾಗುತ್ತಿದೆ. ಆದರೆ, ಹೀಗೆ ಸಾಗಿಸುವಾಗ ಸಾರ್ವಜನಿಕರ ಬಗ್ಗೆ ಕನಿಷ್ಠ ಸುರಕ್ಷತಾ ಕ್ರಮಗಳನ್ನೂ ಅನುಸರಿಸುತ್ತಿಲ್ಲ. ತೆರೆದ ಲಾರಿಗಳಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಕೊಂಡೊಯ್ಯುವುದು ಆತಂಕ ಮೂಡಿಸುತ್ತದೆ ಎನ್ನುತ್ತಾರೆ ಕಾರು ಚಾಲಕ ಮಂಗಳೂರಿನ ನರಸಿಂಹ.