ಶಿರಸಿ: ಸರ್ಕಾರದ ಆದೇಶ ಧಿಕ್ಕರಿಸುವ ಜತೆಗೆ ರಾಜಕೀಯ ಹಿತಾಸಕ್ತಿಗೋಸ್ಕರ ನಿಯಮಾವಳಿಗೆ ವಿರುದ್ಧವಾಗಿ ಯಲ್ಲಾಪುರ ತಾಲ್ಲೂಕಿನ ಚಂದಗುಳಿ ಮತ್ತು ನಂದೊಳ್ಳಿಯಲ್ಲಿ ಕೃಷಿ ಪತ್ತಿನ ಸಂಘ ಸ್ಥಾಪನೆ ಪ್ರಯತ್ನ ನಡೆಸಲಾಗಿದೆ ಎಂದು ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ನಾಗರಾಜ ಕವಡಿಕೆರೆ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಾಥಮಿಕ ಕೃಷಿ ಪತ್ತಿನ ಸಂಘ (ಪ್ಯಾಕ್ಸ್) ರಚಿಸಲು ನಿಯಮಾವಳಿಯಲ್ಲಿ ಅವಕಾಶವಿದ್ದರೂ ಸಂದ ವ್ಯಾಪ್ತಿಯಲ್ಲಿ ಕನಿಷ್ಠ 4 ಸಾವಿರ ಎಕರೆ ಕೃಷಿಭೂಮಿ ಮತ್ತು 600 ಕುಟುಂಬಗಳು ಇರಬೇಕು. ಅವರೆಡೂ ಪ್ರದೇಶಗಳಲ್ಲಿ ಈ ಅರ್ಹತೆ ಇಲ್ಲ’ ಎಂದರು.
‘ಮೂರು ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಸೋತ ಬಣದವರು ಎರಡು ಹೊಸ ಸೊಸೈಟಿ ರಚನೆಗೆ ಮುಂದಾಗಿದ್ದಾರೆ. ಸಂಘ ಒಡೆಯಲು ಹೊರಟಿದ್ದಾರೆ. ಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿ ಸಂಸ್ಥೆ ರಚನೆಗೆ ಸಹಕಾರ ಇಲಾಖೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಹೊಸ ಸೊಸೈಟಿ ರಚನೆಗೆ ಅವಕಾಶ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನವೂ ನಡೆದಿದೆ’ ಎಂದು ಆರೋಪಿಸಿದರು.
ಸಂಸ್ಥೆಯ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ‘ಸಂಘದಲ್ಲಿ ನಂದೊಳ್ಳಿ, ಚಂದಗುಳಿ ಭಾಗದ ರೈತರಿಗೆ ₹20 ಕೋಟಿ ಸಾಲ ಈಗಾಗಲೆ ನೀಡಲಾಗಿದೆ. ಹೊಸ ಸಂಘಗಳು ರಚನೆಯಾದರೆ ಆರ್ಥಿಕ ಸಂಪನ್ಮೂಲ ಇಲ್ಲದೆ ರೈತರಿಗೆ ಸಮಸ್ಯೆ ಆಗಬಹುದು’ ಎಂದರು.