ಅಂಕೋಲಾ: ತಾಲ್ಲೂಕಿನ ಅವರ್ಸಾದಲ್ಲಿ ಶನಿವಾರ ಮುಂಜಾನೆ ಮದುವೆ ಸಮಾರಂಭದ ಸಿದ್ಧತೆಯಲ್ಲಿದ್ದ ಮನೆಯೊಂದರ ಮೇಲೆ ಅಪರಿಚಿತನೊಬ್ಬ ಗುಂಡಿನ ದಾಳಿ ಮಾಡಿದ್ದಾನೆ. ಅದೃಷ್ಟವಶಾತ್ ಗುಂಡು ಮನೆಯ ಗೋಡೆಗೆ ತಗುಲಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ.
ಸ್ಥಳದಲ್ಲಿ ಎರಡು ಗುಂಡುಗಳ ಅವಶೇಷಗಳು ಸಿಕ್ಕಿದ್ದು, ಅವುಗಳನ್ನು ಪೊಲೀಸರು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಬಂದೂಕು ಅಥವಾ ಪಿಸ್ತೂಲಿನ ಮಾಹಿತಿ ತಿಳಿದುಬರಬೇಕಿದೆ.
ಅವರ್ಸಾ ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ರಾಮನಗುಳಿಯ ಯುವತಿಯೊಬ್ಬರ ವಿವಾಹವು ಶನಿವಾರ ನಿಗದಿಯಾಗಿತ್ತು. ಅಲ್ಲಿಗೆ ತೆರಳಲು ಅವರು ಮತ್ತು ಕುಟುಂಬದವರು ಅವರ್ಸಾದ ತಮ್ಮ ಸಂಬಂಧಿಕರಾದ ರೂಪಾ ಸುನೀಲ್ ತಳೇಕರ್ ಎಂಬುವವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು.
ಮದುವೆ ಸಮಾರಂಭದ ಅಂತಿಮ ಸಿದ್ಧತೆಯಲ್ಲಿದ್ದ ಮನೆಯ ಬಳಿ ಮುಂಜಾನೆ 4.10ಕ್ಕೆ ಏಕಾಏಕಿ ಗುಂಡಿನ ಶಬ್ದ ಕೇಳಿ ಮನೆ ಮಂದಿ ಬೆಚ್ಚಿಬಿದ್ದರು. ಯಾರನ್ನೋ ಗುರಿಯಾಗಿಟ್ಟು ಬಂದೂಕಿನಿಂದ ಸಿಡಿಸಿದ ಗುಂಡುಗಳು ಗೋಡೆಗೆ ತಗುಲಿದ್ದವು. ಹಾಗಾಗಿ ಭಾರಿ ಅಪಾಯವೊಂದು ತಪ್ಪಿತು.
ಯುವತಿಯ ಕುಟುಂಬಕ್ಕೆ ಯಾರೂ ಶತ್ರುಗಳಿಲ್ಲ. ಆದರೆ, ಕೆಲವು ದಿನಗಳಿಂದ ತಾಲ್ಲೂಕಿನ ವಜ್ರಳ್ಳಿಯ, ಅಪರಾಧ ಹಿನ್ನೆಲೆಯಿರುವ ವ್ಯಕ್ತಿಯೊಬ್ಬ ಆಕೆಯನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ನಿರಾಕರಿಸಿದ ಕಾರಣ ಆತನೇ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.
ಈ ಘಟನೆಯ ಕುರಿತು ವಧುವಿನ ಸಂಬಂಧಿ ಸಂದೀಪ ತಳೇಕರ ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂಕೋಲಾ ಠಾಣೆ ಇನ್ಸ್ಪೆಕ್ಟರ್ ಈ.ಸಿ.ಸಂಪತ್ ತನಿಖೆ ಕೈಗೊಂಡಿದ್ದಾರೆ.