ಭಟ್ಕಳ: ಮುರುಡೇಶ್ವರ ಭಾಗದಲ್ಲಿ ಗ್ಯಾಸ್ ಏಜೆನ್ಸಿಯವರು ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ ಎಂಬ ಸಾರ್ವಜನಿಕರ ಆರೋಪವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಲಾಖೆಯ ಉಪನಿರ್ದೇಶಕರು ಈ ಬಗ್ಗೆ ತನಿಖೆ ನಡೆಸಲು ಭಟ್ಕಳ ತಹಶೀಲ್ದಾರ್ಗೆ ಸೂಚಿಸಿದ್ದಾರೆ.
ತಾಲ್ಲೂಕಿನ ಕೆಲವು ಗ್ಯಾಸ್ ಏಜೆನ್ಸಿಗಳು ಐದು ಕಿಲೋಮೀಟರ್ ವ್ಯಾಪ್ತಿಯೊಳಗೂ ಸಿಲಿಂಡರ್ ಸರಬರಾಜು ಮಾಡಲು ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿದ್ದವು. ಈ ಬಗ್ಗೆ ಡಿ.18ರ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು ಡಿ.24ರಂದು ಭಟ್ಕಳ ತಹಶೀಲ್ದಾರ್ಗೆ ಸೂಚನೆ ನೀಡಿದ್ದಾರೆ. ಅದರಂತೆ ಡಿ.27ರಂದು ಗ್ಯಾಸ್ ಸರಬರಾಜು ಏಜೆನ್ಸಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಡಿ.28ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು.
ನೋಟಿಸ್ನಲ್ಲಿ, ಗ್ಯಾಸ್ ಏಜೆನ್ಸಿಯವರು ಗೃಹ ಬಳಕೆಯ ಪ್ರತಿ ಸಿಲಿಂಡರ್ಗೆ ₹915ರ ಬದಲಾಗಿ ₹ 975 ಪಡೆದ ದೂರಿನ ಕುರಿತು, ಮೂರು ತಿಂಗಳು ಗ್ಯಾಸ್ ಸಿಲಿಂಡರ್ ಸರಬರಾಜು ಮಾಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಬಿಲ್ ರಸೀದಿ ಪುಸ್ತಕವನ್ನು ಹಾಜರುಪಡಿಸುವಂತೆ ಆದೇಶಿಸಿದ್ದರು.
‘ದಾಖಲೆ ನೀಡಲಿಲ್ಲ’
‘ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡಿದ ಗ್ಯಾಸ್ ಏಜೆನ್ಸಿಯವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಡಿ.28ಕ್ಕೆ ಹಾಜರಾದವರು ಯಾವುದೇ ದಾಖಲೆ ನೀಡದೆ ಹಾಗೆಯೇ ತೆರಳಿದ್ದಾರೆ. ಈ ಬಗ್ಗೆ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ತಹಶೀಲ್ದಾರ್ ರವಿಚಂದ್ರ.ಎಸ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.