ಹೊನ್ನಾವರ (ಉತ್ತರ ಕನ್ನಡ): ಪ್ರಸಿದ್ಧ ಯಕ್ಷಗಾನ ಭಾಗವತ, ತಾಲ್ಲೂಕಿನ ಗುಣವಂತೆಯ ಕೃಷ್ಣ ಭಂಡಾರಿ (61) ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನರಾದರು.
ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಂಭು ಹೆಗಡೆ ಮೊದಲಾದ ಮೇರು ಕಲಾವಿದರೊಂದಿಗೂ ಅವರು ರಂಗದಲ್ಲಿ ತಾಳದ ಸೂತ್ರ ಹಿಡಿದಿದ್ದರು. ಅವರ ವೃತ್ತಿ ಮೇಳ ಹಾಗೂ ಬಯಲಾಟ ಎರಡೂ ಕಡೆಗಳಲ್ಲಿ ಬೇಡಿಕೆಯ ಭಾಗವತರಾಗಿದ್ದರು.
ಹಾಡುಗಾರಿಕೆಯೊಂದಿಗೆ ಮದ್ದಲೆ ಹಾಗೂ ಚೆಂಡೆವಾದನಗಳನ್ನೂ ಬಲ್ಲವರಾಗಿದ್ದರು. ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ ಮುಮ್ಮೇಳದ ಕಲಾವಿದರಾಗಿಯೂ ಅನುಭವ ಹೊಂದಿದ್ದರು. ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿದ್ದ ಅವರು, ಕೆರೆಮನೆ ಮಹಾಬಲ ಹೆಗಡೆ ಅವರಿಂದ ಯಕ್ಷಗಾನದ ಹಲವು ಮಟ್ಟುಗಳನ್ನು ಕಲಿತಿದ್ದರು.
ಕೆರೆಮನೆ ಮೇಳದ ಭಾಗವತರಾಗಿ ಫ್ರಾನ್ಸ್, ಸ್ಪೇನ್ ಮೊದಲಾದ ಐರೋಪ್ಯ ರಾಷ್ಟ್ರಗಳ ತಿರುಗಾಟ ಕೈಗೊಂಡಿದ್ದರು. ಅವರ ಕಲಾಸೇವೆಯಿಂದ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪುರಸ್ಕಾರಗಳಿಗೂ ಭಾಜನರಾಗಿದ್ದರು.