ಶಿರಸಿ: ಯಕ್ಷಗಾನ ಒಗ್ಗಟ್ಟಿನ ಕಲೆಯಾಗಿದ್ದು, ಇಲ್ಲಿ ಯಾವ ಕಲಾವಿದರರನ್ನೂ ಅವಕಾಶ ವಂಚಿತರಾಗಿಸುವ ಪ್ರಮೇಯ ಎದುರಾಗದು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಹೇಳಿದರು.
ಇಲ್ಲಿನ ನಯನ ಸಭಾಂಗಣದಲ್ಲಿ ಭಾನುವಾರ ಸೃಷ್ಟಿ ಕಲಾಪ ಸಂಸ್ಥೆ ಆಯೋಜಿಸಿದ್ದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯಕ್ಷಗಾನದಲ್ಲಿ ಭಾಗವತರಿಗೂ ಮಿತಿ ಇದೆ. ಅವರ ಕೈಲಿ ಸೂತ್ರವೂ ಇದ್ದು, ಸೂತ್ರದ ಗೌರವವನ್ನು ಕಾಪಾಡಿಕೊಳ್ಳಬೇಕಿದೆ’ ಎಂದರು.
‘ಯಕ್ಷಗಾನದಲ್ಲಿ ಬಳಸುವ ಅತಿ ಸ್ವಾತಂತ್ರ್ಯ ಅಪಾಯಕಾರಿ ಹಾಗೂ ಅಮಲಾಗುತ್ತಿದೆ. ಕಲೆಯ ನೈಜ ಸೊಗಡು ಉಳಿದರೆ ಕನ್ನಡ ಭಾಷೆಯೂ ಉಳಿಯುತ್ತದೆ’ ಎಂದರು.
ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಮಾತನಾಡಿ, ‘ಯಕ್ಷಗಾನ ಕಲೆ ಹೃದಯ ಶ್ರೀಮಂತಿಕೆ ಕೊಟ್ಟಿದೆ. ಭಾಷೆಯ ಶುದ್ದತೆ ನೀಡಿದೆ’ ಎಂದರು.
ಸೃಷ್ಟಿ ಕಲಾಪದ ಅಧ್ಯಕ್ಷೆ ವಿಜಯನಳಿನಿ ರಮೇಶ ಅಧ್ಯಕ್ಷತೆ ವಹಿಸಿದ್ದರು. ಸುಬ್ರಾಯ ಹೆಗಡೆ ಕೆರೆಕೊಪ್ಪ ಗುರು ವಂದನೆ ಸ್ವೀಕರಿಸಿದರು.