ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆಯ ಸಂದರ್ಭ ಜಿಲ್ಲೆಯಲ್ಲಿ ವಶ ಪಡಿಸಿಕೊಳ್ಳಲಾದ ಅಕ್ರಮ ಮದ್ಯವನ್ನು ನಗರದ ಅಬಕಾರಿ ಇಲಾಖೆ ಕಚೇರಿ ಆವರಣದಲ್ಲಿ ಬುಧವಾರ ನಾಶ ಮಾಡಲಾಯಿತು. ಗೋವಾ ಮದ್ಯ, ಬಿಯರ್, ಫೆನ್ನಿ, ಕಳ್ಳಭಟ್ಟಿ ಸಾರಾಯಿ ಅದರಲ್ಲಿ ಸೇರಿದ್ದವು.
ಈ ಬಗ್ಗೆ ಮಾಹಿತಿ ನೀಡಿದ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಎಲ್.ಎ.ಮಂಜುನಾಥ್, ‘ಒಟ್ಟು 8,170 ಲೀಟರ್ ವಿವಿಧ ಮದ್ಯ ಹಾಗೂ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳ ಅಂದಾಜು ಮೊತ್ತ₹ 23.73 ಲಕ್ಷವಾಗಿದ್ದು,121 ಪ್ರಕರಣಗಳನ್ನು ದಾಖಲಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.
‘ಬೆಲ್ಲದ ಕೊಳೆ ಅಂಕೋಲಾ ತಾಲ್ಲೂಕಿನಲ್ಲಿ ಹೆಚ್ಚು ಸಿಕ್ಕಿದೆ. ಲೋಕಸಭಾ ಚುನಾವಣೆಯೂ ಸಮೀಪದಲ್ಲೇ ಇರುವ ಕಾರಣ ಇಲಾಖೆಯ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ಮದ್ಯದ ಅಕ್ರಮ ಸಾಗಣೆಯ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ. ಅಕ್ರಮದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಮತ್ತಷ್ಟು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಿದೆ. ಕಡಿಮೆ ಹಣಕ್ಕೆ ಸಿಗುತ್ತದೆ ಎಂದು ಕಳಪೆ ಮದ್ಯ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳಬಾರದು’ ಎಂದು ಮನವಿ ಮಾಡಿದರು.
ಅಬಕಾರಿ ಇಲಾಖೆ ನಿರೀಕ್ಷಕಿ ಸುವರ್ಣಾ ನಾಯ್ಕ ಹಾಗೂ ಇಲಾಖೆಯ ಸಿಬ್ಬಂದಿ ಇದ್ದರು.