ಕುಮಟಾ: ‘ನ್ಯಾಯಾಲಯದಲ್ಲಿ ವಾದ ಮಂಡಿಸಿ ತಮ್ಮ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಟ್ಟಾಗ ವಕೀಲರಿಗೆ ಆಗುವ ಸಂತೋಷ, ಸಾರ್ಥಕ ಭಾವಕ್ಕೆ ಬೆಲೆ ಕಟ್ಟಲಾಗದು’ ಎಂದು ಇಲ್ಲಿಯ ಹಿರಿಯ ಸಿವಿಲ್ ನ್ಯಾಯಾಧೀಶೆ ಭಾಮಿನಿ ಹೇಳಿದರು.
ಇಲ್ಲಿಯ ನ್ಯಾಯಾಲಯ ಆವರಣದಲ್ಲಿ ಗುರುವಾರ ನಡೆದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ‘ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ಯಾವ ಪ್ರಶ್ನೆ ಕೇಳಬೇಕು? ಯಾವುದನ್ನುಕೇಳಬಾರದು ಎನ್ನವ ಸ್ಪಷ್ಟತೆ ವಕೀಲರಿಗೆ ಇರಬೇಕು. ವರ್ಷವಿಡೀ ನಡೆಯುವ ನ್ಯಾಯಾಲಯ ಕೆಲಸದ ನಡುವೆ ಸಣ್ಣ ಖುಷಿ ನಿಡುವ ವಕೀಲರ ದಿನಾಚರಣೆ ಮಹತ್ವದ್ದಾಗಿದೆ’ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೊಯಲಿನ್ ಮೆಂಡೆನ್ಸಾ ಮಾತನಾಡಿ, ‘ನ್ಯಾಯಾಲಯ ಕಲಾಪ ಸುಸೂತ್ರವಾಗಿ ನಡೆಯಬೇಕಿದ್ದರೆ ಇಡೀ ನ್ಯಾಯಾಲಯ ಒಂದು ತಂಡವಾಗಿ ಕೆಲಸ ಮಾಡಬೇಕಿದೆ’ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ವರ್ಷಶ್ರೀ, ‘ವಕೀಲರು ವೃತ್ತಿ ಪ್ರಾವಿಣ್ಯತೆ ಬೆಳೆಸಿಕೊಂಡರೆ ಗೌರವ ಅವರನ್ನು ಅರಸಿ ಬರುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ನಾಯ್ಕ, ‘ಸಮಾಜದ ಯಾವುದೇ ಸ್ತರದ ಸಮಸ್ಯೆಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗುವುದರಿಂದ ವಕೀಲರಿಗೆ ಹೆಚ್ಚಿನ ಜವಾಬ್ದಾರಿಗಳಿರುತ್ತವೆ’ ಎಂದರು.
ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯ್ಕ, ಹೆಚ್ಚುವರಿ ಸರ್ಕಾರಿ ವಕೀಲ ಅಶೋಕ ನಾಯ್ಕ, ವಕೀಲ ಉದಯ ನಾಯ್ಕ ಮಾತನಾಡಿದರು. ವಕೀಲರ ಸಂಘದ ಪದಾಧಿಕಾರಿಗಳಾದ ಎಂ.ಎಸ್. ಭಟ್ಟ, ಮೀನಾಕ್ಷಿ ನಾಯ್ಕ, ಸುಮಾ ಗುನಗಾ, ಆರ್.ಜಿ.ನಾಯ್ಕ ಇದ್ದರು. ಮಧು ಹೆಗಡೆ ನಿರೂಪಿಸಿದರು.