ಕಾರವಾರ: ನಗರದ ಕೋಡಿಬಾಗದಲ್ಲಿ ಕಾಳಿ ನದಿ ಮತ್ತು ಕಡಲತೀರದಲ್ಲಿ ಎನ್.ಸಿ.ಸಿ ಕೆಡೆಟ್ಗಳಿಗೆ ನಡೆಯುತ್ತಿರುವ ಸಮುದ್ರಯಾನ ತರಬೇತಿ ಶಿಬಿರಕ್ಕೆ ಮಂಗಳವಾರ, ಎನ್.ಸಿ.ಸಿ ಏರ್ ಕಮೋಡೊರ್ ಬಿ.ಎಸ್.ಕನ್ವರ್ ಭೇಟಿ ನೀಡಿದರು.
ಎನ್.ಸಿ.ಸಿ ಕರ್ನಾಟಕ ಮತ್ತು ಗೋವಾ ಉಪ ಮಹಾ ನಿರ್ದೇಶಕರಾಗಿರುವ ಅವರು, ಕೆಡೆಟ್ಗಳ ತರಬೇತಿಯನ್ನು ವೀಕ್ಷಿಸಿದರು. ಉಭಯ ರಾಜ್ಯಗಳ 60 ಕೆಡೆಟ್ಗಳು ಹಾಯಿ ದೋಣಿ ಚಲಾಯಿಸುವ ತರಬೇತಿ ಪಡೆಯುತ್ತಿದ್ದಾರೆ.
ಬಳಿಕ ಎನ್.ಸಿ.ಸಿ ಭೂಸೇನಾ ಹಾಗೂ ನೌಸೇನಾದ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಕೆಡೆಟ್ಗಳು ಗೌರವ ವಂದನೆ ಸಲ್ಲಿಸಿದರು. ನಗರದ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ತರಬೇತಿ ಶಿಬಿರಕ್ಕೂ ಅವರು ಭೇಟಿ ನೀಡಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಅ.2ರಿಂದ 12ರವರೆಗೆ ನಡೆಯಲಿರುವ ಅಂತಿಮ ಶಿಬಿರದಲ್ಲಿ ಉತ್ತಮ ಸಾಧನೆ ಮಾಡುವಂತೆ ಹಾರೈಸಿದರು.
ಎನ್.ಸಿ.ಸಿ. ಕರ್ನಾಟಕ ನೌಕಾದಳ ಘಟಕದ ಮುಖ್ಯಸ್ಥ ಕಮಾಂಡರ್ ಸತ್ಯನಾಥ ಭೋಸ್ಲೆ, ಕುಮಟಾ ಎ.ವಿ.ಬಾಳಿಗಾ ಮಹಾವಿದ್ಯಾಲಯದ ಎನ್.ಸಿ.ಸಿ ವಿಂಗ್ ಅಧಿಕಾರಿ ಲೆಫ್ಟಿನೆಂಟ್ ವಿ.ಆರ್.ಶಾನಭಾಗ, ಕಾರವಾರದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್.ಸಿ.ಸಿ ಅಧಿಕಾರಿ ಸಬ್ ಲೆಫ್ಟಿನೆಂಟ್ ಗೀತಾ ತಳವಾರ್ ಇದ್ದರು.