ಶಿರಸಿ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ನಾಲ್ವರ ಪರೀಕ್ಷಾ ವರದಿಗಳು ಬಂದಿವೆ. ನಾಲ್ವರಿಗೂ ಕೊರೊನಾ ಸೋಂಕು ಇಲ್ಲವೆಂದು ವರದಿಯಲ್ಲಿ ದೃಢಪಟ್ಟಿದೆ. ತಬ್ಲೀಗ್ ಜಮಾತ್ ಸಂಘಟನೆಯ ಸಭೆ ಮುಗಿಸಿ ದೆಹಲಿಯಿಂದ ವಾಪಸ್ಸಾದವರು ಬಂದ ರೈಲಿನಲ್ಲಿ ಪ್ರಯಾಣಿಸಿದ್ದ ಇಬ್ಬರು ಹಾಗೂ ಏ.14ರಂದು ಹುಬ್ಬಳ್ಳಿಯಲ್ಲಿ ಕೋವಿಡ್ 19 ದೃಢಪಟ್ಟಿದ್ದ ವ್ಯಕ್ತಿಯೊಬ್ಬರು ಮಾ.23ರಂದು ಯಲ್ಲಾಪುರಕ್ಕೆ ಭೇಟಿ ನೀಡಿದಾಗ ಎಲ್ಐಸಿ ಕಚೇರಿಗೆ ಪ್ರೀಮಿಯಂ ತುಂಬಲು ಹೋಗಿದ್ದ ಕಾರಣಕ್ಕೆ ಈ ಕಚೇರಿ ಇಬ್ಬರನ್ನು ನಿಯಮದಂತೆ ಕ್ವಾರಂಟೈನ್ ಮಾಡಲಾಗಿತ್ತು.
‘ಈ ನಾಲ್ವರೂ ಕಾಯಿಲೆಪೀಡಿತ ವ್ಯಕ್ತಿಗಳ ನೇರ ಸಂಪರ್ಕಕ್ಕೆ ಬಂದವರಾಗಿರಲಿಲ್ಲ ಮತ್ತು ಇವರಿಗೆ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ, ಇವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು’ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.