ಕಾರವಾರ: ತ್ಯಾಗ, ಬಲಿದಾನದ ಸಂಕೇತವಾಗಿ ಮುಸ್ಲಿಂ ಧರ್ಮೀಯರು ಗುರುವಾರ ಬಕ್ರೀದ್ ಆಚರಣೆಯನ್ನು ಸಡಗರದಿಂದ ಆಚರಿಸಿದರು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಕುರ್ಬಾನಿ (ಪ್ರಾಣಿಬಲಿ) ನಡೆಯಿತು.
ಬಕ್ರೀದ್ ಅಂಗವಾಗಿ ಇಲ್ಲಿನ ಕೋಣೆವಾಡಾದಲ್ಲಿರುವ ಮದೀನಾ ಜಾಮಿಯಾ ಮಸೀದಿ, ಕಾಜುಬಾಗದ ಗಫೂರಿ ಮಸೀದಿ, ಸುಂಕೇರಿ, ಸದಾಶಿವಗಡ, ಇನ್ನಿತರ ಕಡೆಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಬಳಿಕ ಖಬರಸ್ತಾನ್ಗೆ ತೆರಳಿ ಪೂರ್ವಜರನ್ನು ಗೌರವಿಸುವ ಪದ್ಧತಿಯನ್ನೂ ಆಚರಿಸಲಾಯಿತು.
ಮನೆಗಳಲ್ಲಿ ಬಕ್ರೀದ್ ವಿಶೇಷವಾಗಿ ಕುರ್ಬಾನಿ ನೀಡಲಾಯಿತು. ಮುಸ್ಲಿಂ ಸಮುದಾಯದವರು ದೇವರಿಗೆ ಅರ್ಪಿಸಿದ ಕುರಿಯ ಮಾಂಸದಲ್ಲಿ ಮೂರು ಪಾಲು ಮಾಡಿ ತಲಾ ಒಂದು ಪಾಲನ್ನು ಬಂಧುಗಳು, ನೆರೆಹೊರೆಯವರು ಮತ್ತು ಬಡ ಕುಟುಂಬಕ್ಕೆ ದಾನ ಮಾಡಿದರು.
ಸಿಹಿಖಾದ್ಯ ತಯಾರಿಸಿ ಪರಸ್ಪರ ಹಂಚಿಕೊಂಡು ಶುಭಾಶಯ ವಿನಿಮಯಿಸಿಕೊಂಡರು. ಮಳೆಯ ನಡುವೆಯೂ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು ಹೊಸ ಬಟ್ಟೆ ತೊಟ್ಟ ಯುವಕರೇ ಹೆಚ್ಚಿನ ಕಡೆಗಳಲ್ಲಿ ಕಂಡುಬರುತ್ತಿದ್ದರು.